ಜೈಪುರ: ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಡೆಸಿದ ಪ್ರತಿಭಟನೆಯನ್ನಾಧರಿಸಿ ಚಲನಚಿತ್ರವೊಂದು ತೆರೆಗೆ ಬರಲಿದೆ.
ಈ ಚಿತ್ರವನ್ನು ಅಧಿಕೃತವಾಗಿ 'ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ' ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಜೈಪುರದ ಗೋವಿಂದ ದೇವ್ ಬ್ರಹ್ಮ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರನಿರ್ಮಾಣದ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಚಳವಳಿಯ ಹಿನ್ನೆಲೆ, ಮತ್ತು ಅದರ ಉದ್ದೇಶಗಳೇನು ಎಂಬುವುದು ಈ ಸಿನಿಮಾದ ಕಥಾಹಂದರ ಎಂದು ಅವರು ತಿಳಿಸಿದ್ದಾರೆ.
ಚಿತ್ರಕ್ಕೆ ಗೋವಿಂದ ದೇವ್ ಅವರು ಚಿತ್ರಕಥೆ ಬರೆಯುತ್ತಿದ್ದು, ಸದ್ಯ ಮುಂಬೈನಲ್ಲಿ ಪ್ರಸಿದ್ಧ ನಿರ್ಮಾಪಕರು ಹಾಗೂ ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿ ಚಳವಳಿಯ ಹಿಂದಿದ್ದ ರಾಜಕೀಯ ಗೊಂದಲಗಳನ್ನು ಹಾಗೂ ಅಸಲಿ ಸತ್ಯಗಳನ್ನು ಬಯಲಿಗೆಳೆಯುವುದಾಗಿ ತಿಳಿಸಿದ್ದಾರೆ.
ಮುಂದುವರಿದು, ವಿದ್ಯಾರ್ಥಿಗಳ ಪ್ರತಿಭಟನೆ ನೂರಕ್ಕೆ ನೂರರಷ್ಟು ನ್ಯಾಯಯುತವಾಗಿತ್ತು. ಆದರೆ, ಆ ನೈಜ ಹೋರಾಟವನ್ನು ಕೆಲವರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಹಾಗೂ ಅನ್ಯ ಉದ್ದೇಶಗಳಿಗೆ ಬಳಸಿಕೊಂಡರು ಎಂಬುದನ್ನು ಈ ಸಿನಿಮಾ ತೋರಿಸಲಿದೆ ಎಂದೂ ತಿಳಿಸಿದ್ದಾರೆ.
ವಿದ್ಯಾರ್ಥಿ ಚಳವಳಿಯಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿದ್ದ ಜನರ ಅನುಭವಗಳ ಪ್ರಕಾರ, ಈ ಪ್ರತಿಭಟನೆ ಇನ್ನು 2-3 ದಿನ ಮುಂದುವರಿದಿದ್ದರೆ ದೇಶದ ಆಂತರಿಕ ಭದ್ರತೆ ಮತ್ತು ಪರಿಸ್ಥಿತಿ ತೀವ್ರ ಸ್ವರೂಪಕ್ಕೆ ತಿರುಗುತ್ತಿತ್ತು. ಚಿತ್ರದ ಮೂಲಕ, ಆ ಸಂಗತಿಗಳನ್ನು ಜನರ ಮುಂದೆ ತರಲಾಗುವುದು ಎಂದು ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮದಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕಥೆಯನ್ನು ಅತ್ಯಂತ ಸಂವೇದನಾಶೀಲವಾಗಿ ನಿರೂಪಿಸಲಾಗುವುದು.
ಮುಂದುವರಿದು, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಚಿತ್ರಣದ ಬಗ್ಗೆ ಮಾತನಾಡಿದ ಅವರು, ಪ್ರಧಾನ್ ರಾಜೀನಾಮೆಯ ನಂತರ ಜಂತರ್ ಮಂತರ್ನಲ್ಲಿ ನಡೆದ ಸಂಭ್ರಮಾಚರಣೆ ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳ ಪ್ರಸಂಗ ಚಿತ್ರದಲ್ಲಿರಲಿದೆ. ಆದರೆ ಮುಖ್ಯ ಗಮನ ರಾಜೀನಾಮೆಯ ಮೇಲಲ್ಲ, ಬದಲಿಗೆ ಈ ಹೋರಾಟವನ್ನು ಬೃಹತ್ ರಾಜಕೀಯ ಅಜೆಂಡಾಕ್ಕಾಗಿ ಹೇಗೆ ಬಳಸಲಾಯಿತು ಎಂಬುದರ ಮೇಲಿರುತ್ತದೆ.
'ನೀಟ್' ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮನನೊಂದು ಕೆಲ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರು. ಅದನ್ನು ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಲು ಬಯಸಿದ್ದರು. ಅಂತವರ ಮುಖವಾಡವನ್ನು ಬಿಚ್ಚಿಡಲಾಗುವುದು ಎಂದಿದ್ದಾರೆ.
ಸದ್ಯ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯಲಾಗುತ್ತಿದೆ. ಅಲ್ಲದೇ ಚಿತ್ರದ ಪೂರ್ವ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ಸಿನಿಮಾ ಚಿತ್ರೀಕರಣಕ್ಕಾಗಿ ಸ್ಥಳವನ್ನು ನಿರ್ಧರಿಸುವ ಕಾರ್ಯವೂ ಸಾಗುತ್ತಿದೆ. ಆದಾಗ್ಯೂ ಚಿತ್ರದಲ್ಲಿ ಅಭಿಜೀತ್ ದೀಪ್ಕೆ ಮತ್ತು ಇತರ ಪ್ರತಿಭಟನಾಕಾರರ ಪಾತ್ರಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ಹಾಗೂ ನಿರ್ದೇಶಕರ ಹೆಸರನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
₹ 20 ಕೋಟಿ ಬಜೆಟ್
ಬರೋಬ್ಬರಿ ₹20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

