ಧಾರ್: ಸುಪ್ರೀಂಕೋರ್ಟ್ ಅನುಮತಿ ಬಳಿಕ ಮಧ್ಯಪ್ರದೇಶದ ಧಾರ್ ನಗರದಲ್ಲಿರುವ ಭೋಜಶಾಲಾ- ಕಮಾಲ್ ಮೌಲಾ ಸಂಕೀರ್ಣದಲ್ಲಿ ಮುಸ್ಲಿಮರು ಶುಕ್ರವಾರ ಪ್ರಾರ್ಥನೆ (ನಮಾಜ್) ಸಲ್ಲಿಸಿದರು.
ಭದ್ರತೆಗಾಗಿ ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಪ್ರಾರ್ಥನೆಯು ಶಾಂತಿಯುತವಾಗಿ ಜರುಗಿತು.
ಕೋರ್ಟ್ನ ನಿರ್ದೇಶನದಂತೆ ಪ್ರಾರ್ಥನೆ ಸಲ್ಲಿಸಲು ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಸ್ಥಳದಲ್ಲಿ ಮಳೆ ಸುರಿಯುತ್ತಿತ್ತು. ಅದರ ಹೊರತಾಗಿಯೂ ಪ್ರಾರ್ಥನೆ ಮುಂದುವರಿಯಿತು. 150ಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿದ್ದರು.
ಇದಕ್ಕೂ ಮುನ್ನ ಜಿಲ್ಲಾಡಳಿತ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಸಭೆ ನಡೆಸಿದರು. ಭೋಜಶಾಲಾ ಬಳಿ ಸರ್ವೆ ನಂ. 612ರ ಬಳಿ ಪ್ರಾರ್ಥನೆ ಸಲ್ಲಿಸುವುದಾಗಿ ಮುಸ್ಲಿಮರು ತಿಳಿಸಿದರು. ಬಳಿಕ ಆಡಳಿತವು ಅಲ್ಲಿ ವ್ಯವಸ್ಥೆ ಮಾಡಿತು.
ಮುನ್ನೆಚ್ಚರಿಕೆಯಾಗಿ ಭೋಜಶಾಲಾ ಸಂಕೀರ್ಣದ ಸುತ್ತ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
'ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ' ಎಂದು ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು, ಮೇ 15ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಮುಸ್ಲಿಮರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಭೋಜಶಾಲಾ ಸಂಕೀರ್ಣಕ್ಕೆ ಹೊಂದಿಕೊಂಡಿರುವ ದರ್ಗಾದ ಆವರಣದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದಕ್ಕೆ ಮುಸ್ಲಿಮರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿತು.

