ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ನ್ಯಾಯಾಂಗೇತರ ಹತ್ಯೆಗಳು ಮತ್ತು ಪೊಲೀಸ್ ಹಿಂಸಾಚಾರದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು,ಕೆಲವೊಮ್ಮೆ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ನಕಲಿ ಎನ್ಕೌಂಟರ್ಗಳು ಅಥವಾ ಇತರ ಘಟನೆಗಳಲ್ಲಿ ಕೊಲ್ಲುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ.
'ಸೆಂಟರ್ ಫಾರ್ ಡಿಸ್ಕೋರ್ಸ್ ಆನ್ ಕ್ರಿಮಿನಲ್ ಆಯಂಡ್ ಕಾನ್ಸ್ಟಿಟ್ಯೂಷನಲ್ ಜ್ಯೂರಿಸ್ಪ್ರುಡೆನ್ಸ್' ಶುಕ್ರವಾರ ಇಲ್ಲಿ ಆಯೋಜಿಸಿದ್ದ 'ಕ್ರಿಮಿನಲ್ ದಾವೆಗಳಲ್ಲಿ ನೈತಿಕತೆ, ಮಾಧ್ಯಮಗಳ ವಿಚಾರಣೆ ಮತ್ತು ಹೇಳಿಕೆಗಳ ಸ್ವೀಕಾರಾರ್ಹತೆ ಕುರಿತು ಉಪನ್ಯಾಸ'' ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ಭುಯಾನ್, ಕಸ್ಟಡಿ ಹಿಂಸಾಚಾರವು ಹಿಂದಿನ ಕಾಲಕ್ಕೆ ಸೇರಿದ್ದು ಎಂದು ತಾನು ಮೊದಲು ಭಾವಿಸಿದ್ದೆ. ಆದರೆ ಪರಿಸ್ಥಿತಿಯು ಆ ಅಭಿಪ್ರಾಯವನ್ನು ಮರುಪರಿಶೀಲಿಸುವುದನ್ನು ಅನಿವಾರ್ಯವಾಗಿಸಿದೆ ಎಂದರು. ಭಾರತದಲ್ಲಿ ಇಂತಹ ನ್ಯಾಯಾಂಗೇತರ ಹತ್ಯೆಗಳು ಹೆಚ್ಚುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
ಯಾವುದೇ ತುರ್ತು ಇಲ್ಲದಿದ್ದರೂ ನಸುಕಿನ 3 ಗಂಟೆಯ ಅವೇಳೆಯಲ್ಲಿ ಅಪರಾಧ ಸ್ಥಳದ ಮರುಸೃಷ್ಟಿಯಂತಹ ಕಾರಣಗಳಿಗಾಗಿ ಆರೋಪಿಗಳನ್ನು ಹೊರಗೆ ಕರೆದುಕೊಂಡು ಹೋಗುವ ಪದ್ಧತಿಯನ್ನು ಬೆಟ್ಟು ಮಾಡಿದ ಅವರು,ಸೂರ್ಯೋದಯದವರೆಗೆ ಕಾಯಲು ಸಾಧ್ಯವಿಲ್ಲವೇ ಮತ್ತು ಅಷ್ಟು ಗಂಭೀರ ತುರ್ತು ಪರಿಸ್ಥಿತಿ ಏನಿದೆ ಎಂದು ಪ್ರಶ್ನಿಸಿದರು.
ತಮ್ಮ ವಶದಲ್ಲಿರುವಾಗ ಆರೋಪಿಗಳು ಮರಣ ಹೊಂದಿದ ನಂತರ ಪೊಲೀಸರು ನೀಡುವ ಸಮರ್ಥನೆಗಳನ್ನು ಉಲ್ಲೇಖಿಸಿದ ಅವರು, ರೈಫಲ್ ಕಸಿದುಕೊಳ್ಳಲು ಯತ್ನ, ನೂಕಾಟ-ನುಗ್ಗಾಟದಲ್ಲಿ ಗುಂಡು ಹಾರಾಟ ಅಥವಾ ಲಾರಿ ಢಿಕ್ಕಿ ಹೊಡೆದಂತಹ ಸುಳ್ಳು ಕಥೆಗಳನ್ನು ಕಟ್ಟುವುದು ಸಾಮಾನ್ಯವಾಗಿಬಿಟ್ಟಿದೆ ಎಂದರು. ತನಿಖೆಯ ಲೋಪಗಳನ್ನು ಮುಚ್ಚಿಹಾಕಲು ಮತ್ತು ವಿಚಾರಣೆಯ ಫಲಿತಾಂಶ ತಿಳಿದಿರುವ ಸಾಧ್ಯತೆಯಿರುವಾಗ ಇಂತಹ ಶಾರ್ಟ್ಕಟ್ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
'ಇಂತಹ ಯಾವುದೇ ಕೃತ್ಯಗಳು ಭಾರತದ ಸಾಂವಿಧಾನಿಕ ಚೌಕಟ್ಟಿಗೆ ಸರಿಹೊಂದುವುದಿಲ್ಲ ಮತ್ತು ನಮ್ಮ ಸಾಂವಿಧಾನಿಕ ವ್ಯವಸ್ಥೆಯು ಅಂತಹ ಶಾರ್ಟ್ಕಟ್ ವಿಧಾನಗಳನ್ನು ಎಂದಿಗೂ ಅನುಮೋದಿಸುವುದಿಲ್ಲ' ಎಂದು ಅವರು ಪ್ರತಿಪಾದಿಸಿದರು.
ಯುವ ಐಪಿಎಸ್ ಅಧಿಕಾರಿಗಳು ಸಿಟ್ಟಿನ ಮುಖದೊಂದಿಗೆ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು.
ಅಂತಹ ಅಧಿಕಾರಿಗಳಿಗೆ ರಾತ್ರಿ ವೇಳೆ ಪೊಲೀಸ್ ಕಸ್ಟಡಿ ಸಿಕ್ಕರೆ ಆರೋಪಿಗಳ ಗತಿ ಏನಾಗಬಹುದು ಎಂದು ಊಹಿಸಲು ಮೈಯೆಲ್ಲಾ ನಡುಕ ಹುಟ್ಟುತ್ತದೆ. ಹೆಚ್ಚಿನ ನ್ಯಾಯಾಧೀಶರು ಪೊಲೀಸ್ ವಶಕ್ಕೆ ಆರೋಪಿಗಳನ್ನು ಒಪ್ಪಿಸಲು ಹಿಂಜರಿಯಲು ಇಂತಹ ಕೃತ್ಯಗಳೇ ಕಾರಣ ಎಂದು ಅವರು ಹೇಳಿದರು.

