ಬದಿಯಡ್ಕ: ಬದಿಯಡ್ಕ ವ್ಯಾಪಾರಿ ಸಮೂಹದ ವತಿಯಿಂದ ಓಣಂ ಕಾರ್ಯಕ್ರಮ ಓಣಂ ಸಿರಿ ಸಂಭ್ರಮ ಇರಾ ಸಭಾಭವನದಲ್ಲಿ ಆಚರಿಸಲಾಯಿತು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಓಣಂ ಕೇವಲ ಒಂದು ಹಬ್ಬವಾಗಿರದೆ, ಜಾತಿ-ಮತ ಭೇದಗಳನ್ನು ಮರೆತು ಎಲ್ಲರೂ ಒಗ್ಗೂಡಿ ಆಚರಿಸುವ ಸೌಹಾರ್ದದ ಹಬ್ಬವಾಗಿದೆ. ಪರಸ್ಪರ ಪ್ರೀತಿ, ಸಹೋದರತ್ವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಇಂತಹ ಆಚರಣೆಗಳು ಸಮಾಜದ ಒಗ್ಗಟ್ಟಿಗೆ ಬಲ ನೀಡುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ಸುಮಾರು 38 ವರ್ಷಗಳಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ಪತ್ರಿಕಾ ವಿತರಕ ಬಾಲಕೃಷ್ಣ ಹಾಗೂ ಹಿರಿಯ ಧಾರ್ಮಿಕ-ಸಾಮಾಜಿಕ ಮುಂದಾಳು ರಾಮನಾಥ ರೈ ಮೇಗಿನಕಡಾರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆವಿವಿಎಸ್ ಜಿಲ್ಲಾ ಕಾರ್ಯದರ್ಶಿ ಕುಂಜಾರು ಮಹಮ್ಮದ್, ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ., ಮಹಿಳಾ ಸಮಿತಿ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್, ಕಾರ್ಯದರ್ಶಿ ಕೃಪಾ, ರಂಗ ಕಲಾವಿದ ಮಧುಸೂದನ ಬಲ್ಲಾಳ್, ರವಿ ನಾಯ್ಕಾಪು, ಅಚ್ಯುತ ಚೇವಾರ್, ಹನೀಫ್ ಲೈವ್, ಸತೀಶ್, ದಯಾನಂದ ರೈ, ಪಾಂಡುರಂಗ ಪ್ರಭು, ಬ್ರಯಾನ್, ಪುಷ್ಪಾವತಿ ನೆಟ್ಟಣಿಗೆ, ಜಗನ್ನಾಥ್ ರೈ, ಅಭಿಷೇಕ್ ಭಟ್, ಜಯಲಕ್ಷ್ಮಿ, ರೀನರೋಸ್, ವಸಂತ ಬಾರಡ್ಕ, ರಮೇಶ್ ಆಳ್ವ ಸಹಿತ ಹಲವರು ಉಪಸ್ಥಿತರಿದ್ದರು. ಪತ್ರಕರ್ತ ಅಖಿಲೇಶ್ ನಗುಮುಗಂ ನಿರೂಪಿಸಿದರು.
ಕನ್ನಡ ಮಾಧ್ಯಮ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಡಾ. ನಾಗೇಶ್ ಬೆಂಗಳೂರು ಅವರ ತಂಡದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು. ಮಧ್ಯಾಹ್ನ ಸಾಂಪ್ರದಾಯಿಕ ಓಣಂ ಭೋಜನವನ್ನು ಏರ್ಪಡಿಸಲಾಯಿತು. ಬಳಿಕ ವಿವಿಧ ಮನರಂಜನಾ ಹಾಗೂ ಓಣಂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ಸೌಹಾರ್ದ, ಸಂಸ್ಕೃತಿ ಮತ್ತು ಸಂಭ್ರಮದೊಂದಿಗೆ ನಡೆದ ಕಾರ್ಯಕ್ರಮವು ಬದಿಯಡ್ಕದಲ್ಲಿ ಓಣಂ ಹಬ್ಬದ ವಿಶೇಷ ಮೆರುಗು ಮೂಡಿಸಿತು.

.jpg)
.jpg)
.jpg)
