ಜನತೆಗೆ ತಲಪಲು `ಸಂವಿಧಾನ ಸಾಕ್ಷರತಾ' ಪುಸ್ತಕ ಸಿದ್ಧ
0
ಡಿಸೆಂಬರ್ 21, 2018
ಕಾಸರಗೋಡು: ರಾಷ್ಟ್ರದ ಪ್ರಜಾಪ್ರಭುತ್ವ ನೀತಿಯ ಬೆನ್ನೆಲುಬಾಗಿರುವ ಸಂವಿಧಾನದ ಬಗ್ಗೆ ಜನಜಾಗೃತಿ ಉಂಟುಮಾಡುವ ಉದ್ದೇಶದಲ್ಲಿ ರಚಿಸಲಾದ ಸಾಕ್ಷರತಾ-ಸಂವಿಧಾನದ ಕುರಿತು ಅಕ್ಷರ ಅಭ್ಯಾಸ ಎಂಬ ಪುಸ್ತಕ ಜನತೆಗೆ ತಲಪಲು ಸಿದ್ಧವಾಗಿದೆ.
ಕೇರಳ ವಿಧಾನಸಭೆ ಮತ್ತು ರಾಜ್ಯ ಸಾಕ್ಷರತಾ ಮಿಷನ್ ಜಂಟಿ ವತಿಯಿಂದ ನಡೆಸಲಾಗುತ್ತಿರುವ ಸಂವಿಧಾನ ಸಾಕ್ಷರತಾ ಜನಪರ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರಕಟಿಸಲಾಗಿದೆ. ಸಂವಿಧಾನದ ಪ್ರಸ್ತಾವನೆ, ಮೌಲ್ಯಯುತ ಹಕ್ಕುಗಳು, ಅವುಗಳಿಗೆ ಸಂಬಂಧಿಸಿದ ಲೇಖನಗಳು, ಮೌಲ್ಯಯುತ ಕರ್ತವ್ಯಗಳು ಇತ್ಯಾದಿ ಮೂಲಭೂತ ವಿಚಾರಗಳಿಗೆ ಸರಳ ಭಾಷ್ಯವನ್ನು ಈ ಹೊತ್ತಗೆ ಬರೆದಿದೆ. ಅತ್ಯುತ್ತಮ ಪ್ರಜಾಪ್ರಭುತ್ವ ನೀತಿ ಅನುಷ್ಠಾನದಲ್ಲಿರುವ ಭಾರತದಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವಿಕೆ ದೃಢವಾದ ತಳಹದಿ ಹೊಂದಿರುವ ಸಾಮಾಜಿಕ ಬದುಕಿಗೆ ಮತ್ತು ಸುರಕ್ಷಿತವಾದ ವ್ಯಕ್ತಿಗತ ಜೀವನಕ್ಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಸಾಕ್ಷರತೆ ಎಂಬ ಆಶಯಕ್ಕೆ ಪ್ರಾಧಾನ್ಯವಿದೆ. ಉತ್ತಮ ತಲೆಮಾರಿನ ಉಗಮಕ್ಕೆ ಈ ಪುಸ್ತಕ ಸಹಕಾರಿ ಎಂದು ನಿರೀಕ್ಷಿಸಲಾಗುತ್ತಿದೆ.
ಪುಸ್ತಕ ಆಧಾರದಲ್ಲಿ ತರಗತಿ : ಜನವರಿ 26 ವರೆಗೆ ಸಂವಿಧಾನ ಸಾಕ್ಷರತಾ ಕಾರ್ಯಕ್ರಮ ಅಂಗವಾಗಿ ರಾಜ್ಯದ ಎಲ್ಲ ವಾರ್ಡ್ ಗಳಲ್ಲಿ ಈ ಪುಸ್ತಕದ ಆಧಾರದಲ್ಲಿ ತರಗತಿಗಳು ನಡೆಯಲಿವೆ. 50 ಲಕ್ಷ ಮಂದಿ ಈ ಪ್ರಕ್ರಿಯಲ್ಲಿ ಭಾಗಿಗಳಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಆಯ್ದ ಸಂಪನ್ಮೂಲ ವ್ಯಕ್ತಿಗಳು, ಪ್ರೇರಕರು, ಜನ ಪ್ರತಿನಿಧಿಗಳು, ಹತ್ತನೇ, ಹೈಯರ್ ಸೆಕೆಂಡರಿ ತತ್ಸಮಾನ ತರಗತಿಗಳಲ್ಲಿ ಕಲಿಯುತ್ತಿರುವವರು ಮೊದಲಾದವರಿಗೆ ಈ ಪುಸ್ತಕ ವಿತರಣೆ ನಡೆಸಲಾಗುವುದು. ಜನವರಿ ಒಂದರಿಂದ ಸಂಬಂಧಪಟ್ಟ ಸಾಕ್ಷರತಾ ಸಮಿತಿಗಳ ನೇತೃತ್ವದಲ್ಲಿ ವಾರ್ಡ್ ಮಟ್ಟದಲ್ಲಿ ತರಗತಿ ನಡೆಸಲಾಗುವುದು.


