ಬದಿಯಡ್ಕ: ಕುಕ್ಕಂಗೋಡ್ಲು ಶ್ರೀಕಂಠಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕ ದಿನ ಭಾನುವಾರ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನವಕ ಕಲಶ ಪೂಜೆ ಮತ್ತು ನಾವಕಾಭಿಷೇಕವನ್ನು ಬಾಯಾರು ರಾಘವೇಂದ್ರ ಮಯ್ಯ ಮತ್ತು ಪುಟ್ಟಣ್ಣ ಅವರು ನೆರವೇರಿಸಿದರು. ಮಹಾಪೂಜೆಯನ್ನು ಅರ್ಚಕ ನರಸಿಂಹ ಮಯ್ಯ ನೆರವೇರಿಸಿ ಮುಂದಿನ ಜೀರ್ಣೋದ್ದಾರ ಕಾರ್ಯಗಳು ಆದಷ್ಟು ಶೀಘ್ರ ನಡೆಯಲು ಪ್ರಾರ್ಥಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು.
ಮಧ್ಯಾಹ್ನ ಅನ್ನದಾನದ ಬಳಿಕ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಮತ್ತು ಸೇವಾ ಸಮಿತಿಗಳ ಜಂಟಿ ಸಭೆಯ ಉಭಯ ಸಮಿತಿಗಳ ಅಧ್ಯಕ್ಷರಾದ ಕೊಡಿಂಗಾರು ಗುತ್ತು ನ್ಯಾಯವಾದಿ ಗೌರಿ ಶಂಕರ ರೈ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸೇವಾ ಸಮಿತಿಯ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ನಿತ್ಯ ನೈಮಿತ್ತಿಕ ಮತ್ತು ಕಿರುಷಷ್ಠಿ ಮಹೋತ್ಸವದ ಆಯವ್ಯಯಗಳನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ಸೇವಾ ಸಮಿತಿ ಕೋಶಾಧಿಕಾರಿ ಉದಯ ಶಂಕರ ಭಟ್ ಕಜಳ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದರು. ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಶಾಮಭಟ್ ಏವುಂಜೆ ಜೀರ್ಣೋದ್ದಾರ ಕಾರ್ಯದ ಮುಂದಿನ ಕಾರ್ಯ ವೆಚ್ಚಗಳ ಬಗ್ಗೆ ವಿವರಣೆ ನೀಡಿದರು. ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ ಭಟ್ ಪಡಿಯಡ್ಪು ಇದುವರೆಗಿನ ಕೆಲಸಗಳು, ಮುಂದೆ ನಡೆಯ ಬೇಕಾದ ಕೆಲಸಗಳ ಮಾಹಿತಿ ನೀಡಿದರು. ಜೀರ್ಣೋದ್ದಾರ ಸಮಿತಿಯ ಲೆಕ್ಕ ಪತ್ರವನ್ನು ಕೋಶಾಧಿಕಾರಿ, ನಿವೃತ್ತ ಮುಖ್ಯೋಧ್ಯಾಯ ಪೆರ್ವ ಕೃಷ್ಣ ಭಟ್ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಕಾರ್ಮಾರು ಮಹಾವಿಷ್ಣು ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಉಪಸ್ಥಿತರಿದ್ದು, ಆದಷ್ಟು ಶೀಘ್ರ ಬ್ರಹ್ಮಕಲಶ ಜರಗುವಂತೆ ಎಲ್ಲರು ಕಟಿಬದ್ದರಾಗಿ ದುಡಿಯಲು ಕರೆಯಿತ್ತರು. ದೇವಳದ ಅರ್ಚಕ ವೃಂದ ರಾಮಕೃಷ್ಣ ಮಯ್ಯ, ಸುಬ್ರಹ್ಮಣ್ಯ ಮಯ್ಯ, ನಾರಾಯಣ ಮಯ್ಯ ನರಸಿಂಹ ಮಯ್ಯ, ಮಹಿಳಾ ಸಮಿತಿಯ ಅಧ್ಯಕ್ಷೆ ಮೈನಾ ಜಿ ರೈ, ಸೂರ್ಯ ಪ್ರಕಾಶ ಶೆಟ್ಟಿ, ಕೃಷ್ಣ ದರ್ಬೆತಡ್ಕ, ಶಿವರಾಮ ರೈ ಏವುಂಜೆ, ಚಂದ್ರಹಾಸ ರೈ ಪಡಿಯಡ್ಪು, ಪ್ರಭಾಕರ ಕೋಳಿಯಡ್ಕ, ರಾಮನ್ ಪಡಿಯಡ್ಪು, ಮಹಾಲಿಂಗ ನಾಯ್ಕ, ಆನಂದ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಗಜರಾಜ ಕೊಡುಮಾಡು ವಂದಿಸಿದರು. ಮಹಿಳಾ ಘಟಕ, ಯುವಕ ವೃಂದ ಸದಸ್ಯರು ಉಪಸ್ಥಿತರಿದ್ದರು.
