ಹಸುರು ಸಂಹಿತೆ ಪಾಲನೆಯೊಂದಿಗೆ ಚುನಾವಣೆ : ಸಂಶಯ ನಿವಾರಣೆಗೆ ಪ್ರಶ್ನೋತ್ತರ ರೂಪದ ಮಾಹಿತಿಯ ಪುಸ್ತಕ ಪ್ರಕಟ
0
ಮಾರ್ಚ್ 25, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಂದರ್ಭ ಹಸುರು ಸಂಹಿತೆ ಪಾಲನೆ ಜಾರಿಗೆ ಸಂಬಂಧಿಸಿ ತಲೆದೋರಬಹುದಾದ ಸಂಶಯಗಳಿಗೆ ಪರಿಹಾರ ಒದಗಿಸುವ ಕೈಹೊತ್ತಗೆಯನ್ನು ಹರಿತ ಕೇರಳಂ ಮಿಷನ್ ಪ್ರಕಟಿಸಿದೆ.
23 ಪುಟಗಳನ್ನು ಹೊಂದಿರುವ ಮಲ್ಟಿ ಕಲರ್ ಪುಸ್ತಕದಲ್ಲಿ ಚುನಾವಣೆ ವೇಳೆ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಸರಕಾರಿ ಸಿಬ್ಬಂದಿ ಪಾಲಿಸಬೇಕಾದ ಹಸುರು ಸಂಹಿತೆ ಕುರಿತು ಪ್ರಶ್ನೋತ್ತರ ರೂಪದಲ್ಲಿ ಮಾಹಿತಿಗಳಿವೆ. ಹಸುರು ಸಂಹಿತೆ ಪಾಲನೆಯೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರಥಮ ಚುನಾವಣೆ ಈ ಬಾರಿಯಾಗಿರುವ ಹಿನ್ನೆಲೆಯಲ್ಲಿ ಈ ಹೊತ್ತಗೆ ತನ್ನದೇ ಆದ ಮಹತ್ವವನ್ನುಹೊಂದಿದೆ.
ಫ್ಲೆಕ್ಸ್ ಗಳಿಗೆ ಬದಲಾಗಿ ಚಾಪೆ, ತೆಂಗಿನ ಗರಿ(ಮಡಲು), ಬಿದಿರು, ಹಾಳೆ ಇತ್ಯಾದಿ ಪ್ರಕೃತಿಗೆ ಪೂರಕಸಾಮಾಗ್ರಿಗಳನ್ನು ಬಳಸಿ ನಿರ್ಮಿಸಿದ ಪ್ರಚಾರ ಫಲಕಗಳು ಇತ್ಯಾದಿಗಳನ್ನು ಪುಸ್ತಕದ ಆರಂಭದಲ್ಲೇ ತಿಳಿಸಲಾಗಿದೆ.
ಅಭ್ಯರ್ಥಿಯನ್ನು ಸ್ವಾಗತ ಮಾಡುವವೇಳೆ ಪ್ಲಾಸ್ಟಿಕ್ ನಿರ್ಮಿತ ಕೊಡುಗೆಗಳ ಬದಲು ಹೂವಿನಹಾರ, ಇತ್ಯಾದಿ ಬಳಸಿ ಅಭ್ಯರ್ಥಿಯ ಬಗೆಗಿನ ಪ್ರೀತಿ, ವಿಶ್ವಾಸದೊಂದಿಗೆ ಭೂಮಿ,ಪ್ರಕೃತಿಯ ಬೆಗೆಗಿನ ಆದರವನ್ನೂ ಸೂಚಿಸುವಂತೆ ಪುಸ್ತಕ ಪ್ರಚೋದನೆ ನೀಡುತ್ತದೆ. ಪ್ಲಾಸ್ಟಿಕ್ ಅಂಶಗಳ ಬಳಕೆಯಿರುವ ಎಲ್ಲ ರೀತಿಯ ಫಲಕ, ಹೋಡಿರ್ಂಗ್, ಭಿತ್ತಪತ್ರ,ಡಿಸ್ಪೋಸಿಬಲ್ ವಸ್ತುಗಳು ಇತ್ಯಾದಿಗಳನ್ನು ಕೈಬಿಡುವಂತೆ ಪುಸ್ತಕ ಆಗ್ರಹಿಸುತ್ತದೆ. ಬಟ್ಟೆ,ಕಾಗದ ನಿರ್ಮಿತ ತೋರಣ, ಸ್ಟೀಲ್ ಲೋಟ, ಹೂವಿನ ಹಾರ, ಲೋಹ ನಿರ್ಮಿತ ಫಲಕಗಳು, ಇತ್ಯಾದಿಗಳನ್ನು ಬಳಸುವಂತೆ ಕರೆನೀಡುತ್ತಿದೆ.
ರಾಜ್ಯದ ಎಲ್ಲ ಹರಿತ ಕೇರಳಂ ಮಿಷನ್ ಜಿಲ್ಲಾ ಕಚೇರಿಗಳ, ಶುಚಿತ್ವ ಮಿಷನ್ ಕಚೇರಿಗಳ ದೂರವಾಣಿ ನಂಬ್ರಗಳೂ ಈ ಪುಸ್ತಕದಲ್ಲಿದ್ದು, ಸಂಶಯಗಳಿದ್ದರೆ ಕರೆಮಾಡಬಹುದು.

