ಚಾಲ ವಿವಿ ಕ್ಯಾಂಪಸ್ ನಲ್ಲಿ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೊಪ- ಸಾಹಿತ್ಯದಲ್ಲಿ ಬದಲಾವಣೆ ಅಗತ್ಯ : ಡಾ. ವಸಂತ ಕುಮಾರ್ ತಾಳ್ತಜೆ
0
April 01, 2019
ಬದಿಯಡ್ಕ: ಸಾಹಿತ್ಯವು ಕಾಲಧರ್ಮಕ್ಕನುಸರಿಸಿ ಸ್ಪಂದಿಸಬೇಕು. ಮತ್ತು ಕಾಲಕ್ಕೆ ಹೊಂದಿಕೊಂಡು ಪ್ರಕಟಗೊಳ್ಳಬೇಕು. ಆದುದರಿಂದಲೇ ಸಮಕಾಲೀನ ಎಂಬ ಪದಕ್ಕೆ ಸರಿಯಾದ ಅರ್ಥ ಬರುತ್ತದೆ ಎಂದು ಮುಂಬೈ ವಿಶ್ವವಿದ್ಯಾಲಯ ನಿವೃತ್ತ ಮುಖ್ಯಸ್ಥರಾದ ಡಾ. ವಸಂತ ಕುಮಾರ್ ತಾಳ್ತಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕಣ್ಣೂರು ವಿಶ್ವವಿದ್ಯಾಲಯದ ಚಾಲದಲ್ಲಿರುವ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗ ಸಂಯೋಜಿಸಿದ ಸಮಕಾಲೀನ ಕನ್ನಡ ಸಾಹಿತ್ಯ ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಸಾಹಿತ್ಯದ ಗುಣವೇ ಚಲನ ಶೀಲವಾಗಿರವುದರಿಂದ, ಕಾಲದೊಂದಿಗೆ ಹೆಜ್ಜೆ ಹಾಕದೇ ಇದ್ದರೆ ಅದು ಸಾಹಿತ್ಯ ಎನಿಸಿಕೊಳ್ಳುವುದಿಲ್ಲ. ಸಹಜವಾಗಿಯೇ ಹಲವು ವಿಷಯಗಳನ್ನು ಹಿಂದಿಕ್ಕುತ್ತಾ, ನೂತನ ವಿಷಯಗಳನ್ನು ಅಳವಡಿಸಿಕೊಳ್ಳುತ್ತಾ ಮತ್ತು ಪರಿಷ್ಕರಿಸುತ್ತಾ ಸಾಹಿತ್ಯ ಸೃಷ್ಟಿ ನಡೆದಿರುವುದನ್ನು ಚರಿತ್ರೆಯಿಂದ ತಿಳಿಯುತ್ತೇವೆ. ಸಾಹಿತ್ಯ ಸಮಕಾಲೀನ ವಾದಾಗ ಅದು ಮುಂದೆ ಚರಿತ್ರೆಯ ದಾಖಲೆಯೂ ಆಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಚರ್ಚಾ ಗೋಷ್ಠಿಯಲ್ಲಿ ಡಾ. ವರದರಾಜ ಚಂದ್ರಗಿರಿ ಮತ್ತು ಡಾ. ಯು. ಮಹೇಶ್ವರಿ ಭಾಗವಹಿಸಿ ವಿಷಯ ಮಂಡನೆ ನಡೆಸಿದರು. ಡಾ. ರಾಧಾಕೃಷ್ಣ ಬೆಳ್ಳೂರು ಸಮನ್ವಯಕಾರರಾಗಿದ್ದರು. ಸಂಶೋಧನಾ ವಿದ್ಯಾರ್ಥಿನಿ ಸೌಮ್ಯ ಪ್ರಸಾದ್ ಮೂರು ದಿನಗಳ ವಿಚಾರ ಸಂಕಿರಣದ ವರದಿ ಮಂಡಿಸಿದರು. ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಬಾಗ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳಲ್ಲಿ ಡಾ. ಬಿ. ಜನಾರ್ಧನ ಭಟ್, ಡಾ. ಧನಂಜಯ ಕುಂಬಳೆ, ಡಾ. ಗೋನಾಳ್ ಲಿಂಗಪ್ಪ, ಡಾ.ರಾಜಶೇಖರ್ ಹಳೆಮನೆ, ಬೇಲೂರ್ ರಘುನಂದನ್, ಡಾ. ರತ್ನಾಕರ ಮಲ್ಲಮೂಲೆ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದರು. ಸಂಶೋಧನ ವಿದ್ಯಾರ್ಥಿಗಳಾದ ಸತ್ಯಬಾಮ ಪಿ, ಚಂದನ, ಉಷಾ, ನಮಿತ, ಹೇಮಾವತಿ, ಶುಭಾಸ್ ಪಟ್ಟಾಜೆ, ವಿದ್ಯಾಲಕ್ಷ್ಮಿ ಪಿ, ಪ್ರವೀಣ್ ಪಿ, ಲತಾ ಶೆಣೈ, ಸುಕೇಶ್ ಕೆ ಬಿ, ಅನಿತಾ ಕುಡಚಿ, ವಿದ್ಯಾಲಕ್ಷ್ಮಿ ಕೆ, ಮಲ್ಲಿಕಾ ಮತ್ತು ಜ್ಯೋತಿಪ್ರಿಯಾ ಪ್ರಬಂಧ ಮಂಡಿಸಿದರು. ಡಾ.ಸುಬ್ರಹ್ಮಣ್ಯ ಕೆ, ರಾಧಾಕೃಷ್ಣ.ಕೆ.ಉಳಿಯತಡ್ಕ ಸಂವಾದದಲ್ಲಿ ಪಾಲ್ಗೊಂಡರು. ಸುಜಿತ್ ಕುಮಾರ್ ಪ್ರಾರ್ಥಿಸಿ, ಸೌಮ್ಯ ಸ್ವಾಗತಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್ ಕುಮಾರ್ ವಂದಿಸಿದರು.