ಕುಂಬಳೆ: ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ, ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಹಾಗೂ ಕುಂಟಂಗೇರಡ್ಕ ಮೊಗೇರ ಸರ್ವೀಸ್ ಸೊಸೈಟಿ ಪ್ರಾದೇಶಿಕ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮೊಗೇರರ ಆಟಿದ ಕೂಟ-2019 ಹಾಗೂ ಸಾಂಸ್ಕøತಿಕ ನೃತ್ಯ ವೈಭವವು ಆ.4 ರಂದು ಕಿದೂರು ಕುಂಟಂಗೇರಡ್ಕ ರಾಜೀವ ಗಾಂಧಿ ಸಭಾ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9ಕ್ಕೆ ಕುಲ ದೈವಗಳಿಗೆ ಕಲಶ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ 11ರ ವರೆಗೆ ಸಾಂಸ್ಕøತಿಕ ನೃತ್ಯ ವೈಭವ, 11 ರಿಂದ 12ರ ವರೆಗೆ ವಾಗ್ಮಿಗಳಾದ ನಂದರಾಜ ಸಂಕೇಶ ಅವರಿಂದ "ಮೊಗೇರರು ಮತ್ತು ಆಟಿ ಆಚರಣೆಗಳು"ವಿಚಾರಗೋಷ್ಠಿ, 12.30ರ ವರೆಗೆ ನಿತಿನ್ ಗೋಳಿಕಟ್ಟೆ ಅವರಿಂದ ಹಾಸ್ಯ ಲಹರಿ, 12.30 ರಿಂದ 1.30ರ ವರೆಗೆ ಕುಮಾರ ಗೋಳಿಕಟ್ಟೆ ಮತ್ತು ತಂಡದವರಿಂದ ದುಡಿ ನಲಿಕೆ, ಕುಂಟಂಗೇರಡ್ಕ ಮೊಗೇರ ಸರ್ವೀಸ್ ಸೊಸೈಟಿ ಪ್ರಾದೇಶಿಕ ಸಮಿತಿ ಮಹಿಳಾ ತಂಡದವರಿಂದ ಚೆನ್ನು ನಲಿಕೆ, 1.30 ರಿಂದ ಆಟಿ ತಿಂಗಳ ವಿಶೇಷ ಊಟೋಪಚಾರ ಆಟಿದ ವನಸ್-ತೆನಸ್ ನಡೆಯಲಿದೆ. ಬಳಿಕ 3ರ ರೆಗೆ ಜಾನಪದ ನೃತ್ಯ ವೈಭವ, ಆಟೋಟ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 3 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಬಾಬು ಯು.ಪಚ್ಲಂಪಾರೆ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ ಉಣ್ಣಿತ್ತಾನ್ ಉದ್ಘಾಟಿಸುವರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕುಂಬಳೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ, ಕುಂಬಳೆ ಗ್ರಾ.ಪಂ.ಸದಸ್ಯೆ ಅರುಣಾ ಎಂ.ಆಳ್ವ, ಸದಸ್ಯರಾದ ಸುಕೇಶ್ ಭಂಡಾರಿ, ಕರ್ನಾಟಕ ರಾಜ್ಯ ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ವಿಕ್ರಮ ಉಪ್ಪಿನಂಗಡಿ, ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಕೆ.ಕೆ.ಸ್ವಾಮಿಕೃಪಾ ಉಪಸ್ಥಿತರಿರುವರು. ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತರನ್ನು ಅಭಿನಂದಿಸಲಾಗುವುದು. ಚಂದ್ರ ಕಾಜೂರು, ಸುಂದರ ಕೊಲ್ಲೂರು ಹಾಗೂ ಮೊಗೇರ ಹಿರಿಯ ಕಲಾವಿದೆ ಸೀತು ಅವರನ್ನು ಗೌರವಿಸಲಾಗುವುದು.