ಬದಿಯಡ್ಕ: ಪ್ರಾಚೀನ ತುಳುನಾಡಿನ ಭಾಗವಾಗಿದ್ದ ಕಾಸರಗೋಡಿನಲ್ಲಿ ಕಣ್ಣೂರು ವಿವಿ ಭಾಷಾ ಅಧ್ಯಯನಾಂಗದ ವಿದ್ಯಾನಗರದಲ್ಲಿರುವ ಚಾಲ ಕ್ಯಾಂಪಸ್ ನಲ್ಲಿ ಪ್ರಸ್ತುತ ವರ್ಷದಿಂದ ಆರಂಭಗೊಳ್ಳಲಿರುವ ಒಂದು ವರ್ಷದ ತುಳು ಡಿಪ್ಲೊಮಾ ತರಗತಿಗಳ ಪೂರ್ವಭಾವೀ ಪ್ರವೇಶ ಪರೀಕ್ಷೆ ಶನಿವಾರ ಚಾಲ ಕ್ಯಾಂಪಸ್ ನಲ್ಲಿ ಕುತೂಹಲಕರವಾಗಿ ನಡೆಯಿತು.
ಕೇರಳದ ಪ್ರಥಮ ತುಳು ಡಿಪ್ಲೊಮಾ ಕೋರ್ಸ್ ಇದಾಗಿದ್ದು, ಈ ಹಿಂದೆ ಮಂಗಳೂರು ವಿವಿಯಲ್ಲಿ ತುಳು ಡಿಪ್ಲೊಮಾ ಕೋರ್ಸ್ ಆರಂಭಿಸಿತ್ತಾದರೂ ಅದರ ಒಂದು ಬ್ಯಾಚ್ ಮಾತ್ರವೇ ಕಾರ್ಯಾಚರಿಸಿತ್ತು. ಬಳಿಕ ತಾಂತ್ರಿಕ ಕಾರಣಗಳಿಂದ ಕೋರ್ಸ್ ನಿಂತಿತ್ತು.
ಪ್ರವೇಶ ಪರೀಕ್ಷೆಯ ಬಗ್ಗೆ:
ಶನಿವಾರ ನಡೆದ ಪ್ರವೇಶ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ್ದವರಲ್ಲಿ 26 ರಷ್ಟು ಮಂದಿ ಭಾಗವಹಿಸಿದ್ದರು. ಒಂದು ಗಂಟೆಗಳ ಕಾಲಾವಧಿಯ ಪರೀಕ್ಷೆಯಲ್ಲಿ 25 ಅಂಕಗಳ ಒಟ್ಟು 16 ಪ್ರಶ್ನೆಗಳನ್ನು ಕೇಳಲಾಗಿತ್ತು. ತುಳು ಭಾಷೆ, ಸಾಹಿತಿ, ಪರಂಪರೆ, ಸಾಂಸ್ಕøತಿಗಳ ಪರಿಚಯ ಜ್ಞಾನ ಆಧಾರಿತವಾದ ಪ್ರಶ್ನೆಗಳು ಆಗಮಿಸಿದ್ದ ಪರೀಕ್ಷಾರ್ಥಿಗಳಿಗೆ ಹುರುಪು ನೀಡಿತು. ಕನ್ನಡ ಲಿಪಿಯಲ್ಲಿ ತುಳು ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಾಗಿತ್ತು. ಬೂತೊಲೆ ಹುಟ್ಟು, ಕಟ್ಟ್, ಕಾರಣಿಕೊನ್ ಉಂದು ಪನ್ಪುಂಡು, ತುಳುತ ಪದ್ರಾಡ್ ತಿಂಗೊಳು ಒವು ಪೂರಾ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿದ ಸುರುತ ಗುರುಕಾರೆರ್ ಏರ್, ಪರಶುರಾಮ ಕ್ಷೇತ್ರದ ಬಗ್ಗೆ ವಾ ಪುರಾಣೊಡು ಮಾಹಿತಿ ಉಂಡು, ತುಳು ನಾಡ್ ದ ಬಗ್ಗೆ ಉಲ್ಲೇಖ ಇಪ್ಪುನ ಸಾಹಿತ್ಯ ಒವು, ತುಳುನಾಡ್ ನ್ ಆಡಳಿತ ಮಂತಿನ ಪ್ರಮುಖ ರಾಜವಂಶ ಒವು ಮೊದಲಾದ ಗಮನಾರ್ಹ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೊನೆಯ ಪ್ರಶ್ನೆಯಾಗಿ ಐದು ಅಂಕಗಳ ಪ್ರಬಂಧವಾಗಿ ತುಳುನಾಡ್ ದ ಬಗೆಟ್ ಅರ್ಧ ಪುಟ ಬರೆಯಲು ತಿಳಿಸಲಾಗಿತ್ತು. ಮುಂದಿನ ಪ್ರಥಮ ತರಗತಿ ಆ.31 ರಂದು ಬೆಳಿಗ್ಗೆ 10 ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ವಿವಿ ಅಧ್ಯಯನಾಂಗ ಮುಖ್ಯಸ್ಥ ಡಾ.ರಾಜೇಶ್ ಬೆಜ್ಜಂಗಳ ತಿಳಿಸಿದ್ದಾರೆ. ಪರೀಕ್ಷಾ ತರಗತಿಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸಂಶೋಧನಾ ವಿದ್ಯಾರ್ಥಿ ರವಿಶಂಕರ ಭರಣ್ಯ ಮೇಲ್ವಿಚಾರಕರಾಗಿ ಸಹಕರಿಸಿದರು.
ಏನಿದು ತುಳು ಡಿಪ್ಲೊಮಾ?:
ಒಂದು ವರ್ಷದ ಕೋರ್ಸ್ ಇದಾಗಿದೆ. ರೆಗ್ಯುಲರ್ ಕೋರ್ಸ್ಗೆ ತೆರಳುವವರು ಕೂಡ ತುಳು ಡಿಪ್ಲೊಮಾ ಕೋರ್ಸ್ನ್ನು ಮಾಡಬಹುದು. ತುಳು ಭಾಷೆ, ಪ್ರಾಚೀನ ಸಾಹಿತ್ಯ, ಪತ್ರಿಕೋದ್ಯಮ ಮೊದಲಾದುವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತರಗತಿ ನಡೆಯಲಿದೆ. ಆರಂಭಿಕ ಪ್ರವೇಶ ಶುಲ್ಕ 250 ಪಾವತಿಸಿ ಬಳಿಕ ತರಗತಿ ಆರಂಭದ ಬಳಿಕ 4700 ರಷ್ಟು ರೂ.ಗಳನ್ನು ಪಾವತಿಸಿ ತರಗತಿಗೆ ಹಾಜರಾಗಬಹುದಾಗಿದೆ.
ಮೊದಲ ಹೆಜ್ಜೆ: ಸಂಶೋಧನೆ ಹಾಗೂ ಪ್ರಾದೇಶಿಕ ಅಭಿವೃದ್ಧಿ ಅಧ್ಯಯನ ಯೋಜನೆಗಳಿಗೆ ಪ್ರಾಧಾನ್ಯತೆ ನೀಡಿ ಭಾಷೆಗಳ ಸಂರಕ್ಷಣೆ ಉದ್ದೇಶಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಬಹುಭಾಷಾ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆರಂಭಿಸಲು ವಿವಿ ತೀರ್ಮಾನಿಸಿತ್ತು. ಇದರ ಮೊದಲ ಹೆಜ್ಜೆ ಎಂಬಂತೆ ತುಳು ಡಿಪ್ಲೊಮಾ ಕೋರ್ಸ್ ಆರಂಭವಾಗಿದೆ.
ಅಭಿಮತ:
ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಭಾಷಾಂತರ ಮೊದಲಾದವುಗಳಿಗೆ ಪ್ರೋತ್ಸಾಹ, ಆಸಕ್ತರಿಗೆ ಮಾರ್ಗದರ್ಶನ ನೀಡುವಲ್ಲಿ ಕಣ್ಣೂರು ವಿವಿಯ ಮೂಲಕ ಆರಂಭಿಸಲಾಗಿರುವ ಕೇರಳದ ಮೊತ್ತಮೊದಲ ತುಳು ಭಾಷಾ ಡಿಪ್ಲೊಮಾ ತರಗತಿ ಅತ್ಯಂತ ಸ್ತುತ್ಯರ್ಹವಾದುದು. ಸರ್ಕಾರ ಗಡಿನಾಡಿನ ತುಳು ಭಾಷಾ ಸಂರಕ್ಷಣೆ, ಅಭಿವೃದ್ದಿಗಾಗಿ ಆಸಕ್ತಿ ವಹಿಸಿರುವುದು ಉತ್ತಮ ಬೆಳವಣಿಗೆ.ಈಗಾಗಲೇ ಕೇರಳ ತುಳು ಅಕಾಡೆಮಿಗೆ ರೂಪುನೀಡಿ, ಒಮದು ಎಕ್ರೆ ನಿವೇಶನ ನೀಡಿ ಬಳಿಕ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದು, ಅದರ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ತುಳು ಡಿಪ್ಲೊಮಾ ತರಗತಿಯೂ ಆರಂಭಗೊಂಡಿರುವುದು ಕಾಸರಗೋಡಿನ ಸುಯೋಗ. ಪ್ರಥಮ ತಂಡದಲ್ಲಿ ಪ್ರವೇಶ ಪಡೆದಿರುವ ಡಿಪ್ಲೊಮಾ ತರಗತಿಯ ಎಲ್ಲಾ ಅಧ್ಯಯನಶೀಲರಿಗೆ ತುಳು ಅಕಾಡೆಮಿಯ ಹಾರ್ಧಿಕ ಅಭಿನಂದನೆ. ಕೇರಳ ತುಳು ಅಕಾಡೆಮಿ ಅಗತ್ಯವಿರುವಲ್ಲಿ ಈ ಅಧ್ಯಯನಗೈದವರನ್ನು ಪರಿಗಣಿಸಿ ವಿವಿಧ ಸಂದರ್ಭ ಬಳಸಿಕೊಳ್ಳಲಾಗುವುದು.
ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು
ಕೇರಳ ತುಳು ಅಕಾಡೆಮಿಯ ಅಧ್ಯಕ್ಷರು.


