ಕಾಸರಗೋಡು: ಮಳೆಗಾಲ ಬಿರುಸುಗೊಂಡು ಹಾವಳಿ ನೀಡಿದ ಪರಿಣಾಮ ಜಿಲ್ಲೆಯಲ್ಲಿ ಅಂಟುರೋಗಗಳು ಹರಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಾಗರೂಕತೆ ವಹಿಸುವಂತೆ ಜಿಲ್ಲಾವೈದ್ಯಾಧಿಕಾರಿ(ಆರೋಗ್ಯ) ಸಲಹೆ ಮಾಡಿದ್ದಾರೆ.
ಜಲೋದರ, ಹಳದಿ ಜ್ವರ, ಇಲಿಜ್ವರ ಸಹಿತ ರೋಗಗಳಿಂದ ತೊಡಗಿ ಮಲಿನಜಲದಿಂದ ಹರಡಬಹುದಾದ ರೋಗಗಳು, ಸೊಳ್ಳೆಗಳಿಂದ ಹರಡುವ ಡಂಗೆ, ಮಲೇರಿಯ ಸಹಿತ ಜ್ವರಗಳು ಹರಡುವ ಭೀತಿಯಿದ್ದು, ಜಾಗ್ರತೆ ವಹಿಸುವ ಅಗತ್ಯವಿದೆ ಎಂದವರು ನುಡಿದರು.
ಇಲಿಜ್ವರ:
ಜ್ವರ,ತಲೆನೋವು, ಕಾಲು ಹಿಮ್ಮಡಿ ಪೇಷಿಗಳಲ್ಲಿ, ಉದರ ಪೇಷಿಗಳಲ್ಲಿ ನೋವು, ಕಣ್ಣುಗಳು ಕೆಂಪಾಗುವುದು ಇತ್ಯಾದಿಗಳು ಇಲಿಜ್ವರದ ಲಕ್ಷಣಗಳಾಗಿವೆ. ಮೂತ್ರಜನಕಾಂಗವನ್ನು ಬಾಧಿಸುವ ಹಿನ್ನೆಲೆಯಲ್ಲಿ ಮೂತ್ರದ ಅಳತೆಯಲ್ಲಿ ಕಡಿಮೆಯಾಗುವುದು, ಮೂತ್ರದಲ್ಲಿ ರಕ್ತ ಬೆರೆತಿರುವುದು, ಶ್ವಾಸಕೋಶವನ್ನು ಬಧಿಸಿದಲ್ಲಿ ಕೆಮ್ಮು, ಎದೆನೋವು, ಕರುಳನ್ನು ಬಧಿಸಿದಲ್ಲಿ ಹಳದಿಜ್ವರ ಇದರ ಲಕ್ಷಣಗಳಾಗಿವೆ. ಕರುಳುರೋಗ, ಸಿಹಿಮೂತ್ರ ರೋಗ ಇತ್ಯಾದಿಗಳಿದ್ದಲ್ಲಿ ಈ ರೋಗಬಾಧೆ ಸುಲಭವಾಗುತ್ತದೆ.
ಮುಂಜಾಗರೂಕತೆ:
ವಾರಕ್ಕೊಮ್ಮೆ ಎರಡು ಡೋಕ್ಸಿ ಸೈಕ್ಲಿನ್ ಗುಳಿಗೆಯಂತೆ 8 ವಾರ ಸೇವಿಸಬೇಕು. ಮಲಿನ ಜಲದ ನಿರಂತರ ಸಂಪರ್ಕ ಇರುವವರು ಈ ಗುಳಿಗೆ ಕಡ್ಡಾಯವಾಗಿ ಸೇವಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಈ ಗುಳಿಗೆ ಉಚಿತವಾಗಿ ಲಭ್ಯವಿವೆ. ಜಾನುವಾರುಗಳ ಮೂತ್ರ ಸ್ಪರ್ಶಿಸದಂತೆ ಜಾಗ್ರತೆ ವಹಿಸಬೇಕು. ಕೈಕಾಲುಗಳಲ್ಲಿ ಗಾಯಗಳಿದ್ದಲ್ಲಿ ಮಲಿನಜಲ ತಾಕದಂತೆ ನೋಡಿಕೊಳ್ಳಬೇಕು. ವ್ಯಕ್ತಿಗತ ಶುಚಿತ್ವ ಕ್ಕೆ ಆದ್ಯತೆ ನೀಡಬೇಕು. ಪುನರ್ವಸತಿ ಶಿಬಿರಗಳಲಿರುವವರು, ಮನೆಗಳಿಗೆ ಮರಳಿ ಹೋದವರು ನೀರನ್ನು ಕ್ಲೋರಿನೇಷನ್ ನಡೆಸುವ ವಿಚಾರ ಮರೆಯಕೂಡದು. ಕುದಿಸಿ ತಣಿಸಿದ ನೀರನ್ನು (ಕನಿಷ್ಠ 20ನಿಮಿಷ ಕುದಿಸಬೇಕು)ಮಾತ್ರ ಕುಡಿಯಬೇಕು.

