ಪೆರ್ಲ: ತುಳು ಭಾಷಿಕರ ಆಚರಣೆಯಂತೆ ಆಟಿ ತಿಂಗಳು ಜನರಿಗೆ ಕಷ್ಟದ ತಿಂಗಳು. ಇಂತಹ ಸಮಯದಲ್ಲಿ ಪ್ರಕೃತಿಯಿಂದ ದೊರಕುವ ಗಿಡಗಳಿಂದ ತಯಾರಿಸಿದ ತಿಂಡಿ ತಿನಸುಗಳನ್ನು ಸೇವನೆ ಮಾಡುವುದರಿಂದ ಜನರು ಆರೋಗ್ಯದಿಂದಿರುತ್ತಿದ್ದರು. ಜನರಿಗೆ ಆಟಿ ತಿಂಗಳಲ್ಲಿ ನಡೆಸುವ ಆಚರಣೆ ,ಪದ್ದತಿಯ ಬಗ್ಗೆ ಅರಿವಿರಬೇಕಾದರೆ ಇಂತಹ ಆಟಿಡೊಂಜಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಗತ್ಯ. ಸಂಘಟಕರ ಕಾರ್ಯ ಶ್ಲಾಘನೀಯವೆಂದು ಎಣ್ಮಕಜೆ ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ ನುಡಿದರು.
ಅವರು ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ ಮತ್ತು ವಾರ್ಡು ಮಟ್ಟದ ಕುಟುಂಬಶ್ರೀ ವತಿಯಿಂದ ಭಾನುವಾರ ನಡೆದ "ಆಟಿಡೊಂಜಿ ದಿನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಯಸ್. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಎ. ಬಿ ರಾಧಾಕೃಷ್ಣ ಬಲ್ಲಾಳ್ ಅವರು ಮಾತನಾಡಿ, ಆಟಿ ತಿಂಗಳಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ರೋಗ ರುಜಿನಗಳನ್ನು ಕಳೆಯುವ ಆಟಿ ಕಳೆಂಜ ಬಗ್ಗೆಯಾಗಲಿ, ಸಂಪ್ರದಾಯ ಆಚರಣೆಗಳ ಬಗ್ಗೆ ಎಲ್ಲರಿಗೂ ಅರಿವಿಲ್ಲ. ಈ ಆಧುನಿಕ ಯುಗದಲ್ಲಿ ತುಳು ಸಂಸ್ಕೃತಿಯ ಬಗ್ಗೆ ಯುವ ಜನತೆಯು ತಿಳಿದು ಅದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಇದೆ. ಜೊತೆಗೆ ಜಾನಪದ ಆಚರಣೆಗಳ, ಸಾಹಿತ್ಯದ ಬಗ್ಗೆ ತಿಳಿದಿರಬೇಕು. ಓದುವುದರಿಂದ ವ್ಯಕ್ತಿ ತಲೆಯೆತ್ತಿ ನಡೆಯಬಲ್ಲ. ಈ ನಿಟ್ಟಿನಲ್ಲಿ ಗ್ರಂಥಾಲಯದ ಕಾರ್ಯ ಮಹತ್ವ ಪಡೆದಿದೆ ಎಂದು ನುಡಿದರು.
ಆಟಿ ತಿಂಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಆಶಾಲತಾ ಚೇವಾರು ನೀಡಿದರು. ಆಟಿ ತಿಂಗಳ ಆಚರಣೆ ,ಸಂಪ್ರದಾಯ, ದೈವ ದೇವರುಗಳ ಬಗ್ಗೆ , ಸಂಸ್ಕೃತಿಯನ್ನು ಬೆಳೆಸುವ ಬಗ್ಗೆ ತಮ್ಮ ಪಾಂಡಿತ್ಯವನ್ನು ಮೆರೆದರು. ಸಭೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ ಕೆ, ವಾರ್ಡು ಮಟ್ಟದ ಕುಟುಂಬಶ್ರೀ ಎ.ಡಿ.ಯಸ್ ಅಧ್ಯಕ್ಷೆ ವಲ್ಸಮ್ಮ ಉಪಸ್ಥಿತರಿದ್ದರು. ಸಿಂಚನ ಪಿ.ಯಸ್ ಕಟ್ಟೆ ಪ್ರಾರ್ಥಿಸಿದರು.ಗ್ರಂಥಾಲಯದ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ಸಮಿತಿ ಸದಸ್ಯ ರವಿ ವಾಣಿನಗರ ವಂದಿಸಿದರು.ರಾಜೇಶ್ ಬೈರಡ್ಕ ಕಾರ್ಯಕ್ರಮ ನಿರೂಪಿಸಿದರು.
ಆಟಿಡೊಂಜಿ ಕಾರ್ಯಕ್ರಮದಂಗವಾಗಿ ವಿವಿಧ ಸ್ಪರ್ಧೆ ನಡೆಯಿತು.ಕುಟುಂಬಶ್ರೀ ಸದಸ್ಯೆಯರು ತಯಾರಿಸಿದ ಪತ್ರೋಡೆ ,ಮೆಂತೆ ಗಂಜಿ,ಕೊತ್ತಂಬರಿ ಗಂಜಿ,ಸಾಸಿವೆ ಗಂಜಿ,ಶುಂಠಿ ಚಟ್ನಿ ,ಉಪ್ಪಿನ ಸೋಳೆ ಪಲ್ಯ, ಅರಸಿನ ಎಲೆ ಗಟ್ಟಿ ,ಸೀಗೇ ಎಲೆಯ ಚಿಗುರು ಚಟ್ನಿ, ಹತ್ತು ಬಗೆಯ ಎಲೆಯ ಚಿಗುರು ಪಲ್ಯ, ಚೀಮ್ಮುಳ್ಳು ಎಲೆ ಚಿಗುರು ಸಾರು ಇತ್ಯಾದಿಗಳ ಭೋಜನ ಸವಿಯನ್ನು ಏರ್ಪಡಿಸಲಾಗಿತ್ತು.



