ಕಾಸರಗೋಡು: ತರಗತಿಯೊಳಗೆ ವಿಷಪೂರಿತ ಹಾವು ಕಡಿದು, ಹತ್ತರ ಹರೆಯದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ವಯನಾಡ್ ಜಿಲ್ಲೆಯ ಸುಲ್ತಾನ್ಬತ್ತೇರಿಯಲ್ಲಿ ಬುಧವಾರ ನಡೆದಿದೆ. ಬಾಲಕಿ ಸಾವಿಗೆ ಕಾರಣರಾಗಿದ್ದಾರೆನ್ನಲಾದ ಶಾಲಾ ಶಿಕ್ಷಕನನ್ನು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಜತೆಗೆ ಇತರ ಅಧ್ಯಾಪಕರಿಗೆ ಕಾರಣ ಕೇಳಿ ನೋಟೀಸು ಜಾರಿಗೊಳಿಸಲಾಗಿದೆ.
ಸುಲ್ತಾನ್ಬತ್ತೇರಿಯ ಸರ್ಕಾರಿ ಸರ್ವಜನ ವೊಕೇಶನಲ್ ಹೈಯರ್ಸೆಕೆಂಡರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಶೆಹಲಾ ಶೆರಿನ್(10)ಮೃತಪಟ್ಟ ಬಾಲಕಿ. ಶಾಲಾ ಶಿಕ್ಷಕ ಶಿಜಿನ್ ಎಂಬಾತನನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ. ಘಟನೆ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಂದ ಸ್ಪಷ್ಟನೆ ಕೇಳಿ ನೋಟೀಸು ರವಾನಿಸಿದೆ. ಈ ಬಗ್ಗೆ ಸಮಗ್ರ ತನಿಖೆಯ ನಂತರ ಶಿಕ್ಷಕನ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ವಯನಾಡು ಜಿಲ್ಲಾಧಿಕಾರಿ ಆದಿಲಾ ಅಬ್ದುಲ್ಲ ತಿಳಿಸಿದ್ದಾರೆ.
v Àರಗತಿ ಕೊಠಡಿಯ ಸಂದಿಯಲ್ಲಿದ್ದ ಹಾವು ಶೆಹಲಾ ಶೆರಿನ್ಗೆ ಕಡಿದಿದ್ದು, ಶಾಲೆಯಲ್ಲಿ ವಾಹನವಿದ್ದು, ಸನಿಹದಲ್ಲಿ ಆಸ್ಪತ್ರೆಯಿದ್ದರೂ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶಿಕ್ಷಕ ತೋರಿದ ನಿರ್ಲಕ್ಷ್ಯದ ಬಗ್ಗೆ ಶಾಲೆಯ ಇತರ ವಿದ್ಯಾರ್ಥಿಗಳು ಮಾಧ್ಯಮದವರೊಂದಿಗೆ ಅಳಲು ವ್ಯಕ್ತಪಡಿಸಿದ್ದಾರೆ. ಹಾವು ಕಡಿದಿರುವುದಾಗಿ ವಿದ್ಯಾರ್ಥಿನಿ ತಿಳಿಸಿದರೂ, ಶಿಕ್ಷಕರು ಬಾಲಕಿಯನ್ನು ಆಸ್ಪತ್ರೆಗೆ ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಲಿಲ್ಲ. ಬಾಲಕಿಗೆ ಹಾವು ಕಡಿದಿಲ್ಲ, ಕಬ್ಬಿಣದ ಮೊಳೆ ಚುಚ್ಚಿರುವುದಾಗಿ ಶಿಕ್ಷಕ ಸಮಜಾಯಿಷಿ ನೀಡಿದ್ದನು!
ಬಾಲಕಿ ಹೆತ್ತವರು ಶಾಲೆಗೆ ಆಗಮಿಸಿದ ನಂತರ ಬಾಲಕಿಯನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೋಡಿಗೆ ಸಾಗಿಸುವ ಹಾದಿ ಮಧ್ಯೆ ಬಾಲಕಿ ಮೃತಪಟ್ಟಿದ್ದಳು. ಶಾಲೆಯೊಳಗೆ ವಿಷಜಂತುಗಳು ಪ್ರವೇಶಿಸುವ ರೀತಿಯ ವಾತಾವರಣ ನಿರ್ಮಿಸಿರುವ ಬಗ್ಗೆ ಶಾಲಾ ಅಧಿಕಾರಿಗಳಲ್ಲಿ ಇಲಾಖೆ ಸ್ಪಷ್ಟೀಕರಣ ಕೇಳಿದೆ.


