ಕುಂಬಳೆ: ಕನ್ನಡ ಕಿರಿಯ ಹಾಗೂ ಹಿರಿಯ ಮಾಧ್ಯಮಿಕ ತರಗತಿ ಶಿಕ್ಷಕ ನೇಮಕಾತಿಯ ನಿಧಾನಗತಿಯನ್ನು ಮನಗಂಡು ಶೀಘ್ರ ನೇಮಕಾತಿಯನ್ನು ನಡೆಸಲು ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರ ನೇತೃತ್ವದಲ್ಲಿ ಕನ್ನಡ ಉದ್ಯೋಗಾರ್ಥಿಗಳು ಇತ್ತೀಚೆಗೆ ತಿರುವನಂತಪುರಕ್ಕೆ ತೆರಳಿ ರಾಜ್ಯ ಶಿಕ್ಷಣ ಸಚಿವರಿಗೆ ಮನವಿ ನೀಡಿ ಸಮಾಲೋಚನೆ ನಡೆಸಿದರು.
ಮಲೆಯಾಳ ಮಾಧ್ಯಮದ ಕಿರಿಯ, ಹಿರಿಯ ಮಾಧ್ಯಮಿಕ ಶಾಲೆಗಳ ನೇಮಕಾತಿ ಹಿಂದಿನ ಪಟ್ಟಿ ಪೂರ್ಣಗೊಂಡು ಇದೀಗ ಹೊಸ ಅಧಿಸೂಚನೆ ಹೊರಡಿಸಲು ಸರ್ಕಾರ ತಯಾರಿ ನಡೆಸಿದ್ದು, ಇದರೊಂದಿಗೆ ಕನ್ನಡ ಮಾಧ್ಯಮಕ್ಕೂ ಅಧಿಸೂಚನೆಯನ್ನು ಶೀಘ್ರ ಹೊರಡಿಸಬೇಕೆಂದು ಸಚಿವರಲ್ಲಿ ಒತ್ತಾಯಿಸಲಾಯಿತು. ಜೊತೆಗೆ ಕನ್ನಡ ಕಿರಿಯ ಪ್ರಾಥಮಿಕ ಕೆ.ಟೆಟ್ ಕೆಟಗರಿ ಸಂಖ್ಯೆ 1ರ ಪರೀಕ್ಷಾ ಪ್ರಶ್ನೆ ಪತ್ರಿಕೆ ಮಲೆಯಾಳದಲ್ಲಿ ಇರುವುದರಿಂದ ಕನ್ನಡ ಉದ್ಯೋಗಾರ್ಥಿಗಳಿಗೆ ಉತ್ತೀರ್ಣರಾಗಲು ಅಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡದಲ್ಲೂ ಪ್ರಶ್ನೆ ಪತ್ರಿಕೆ ಒದಗಿಸುವಂತೆ ಮನವಿಯಲ್ಲಿ ವಿನಂತಿಸಲಾಯಿತು.
ಪುಂಡರೀಕಾಕ್ಷ ಕೆ.ಎಲ್ ಅವರೊಂದಿಗಿದ್ದ ನಿಯೋಗದಲ್ಲಿ ದೇವೀಪ್ರಸಾದ್, ಅನಿತ, ರಮಣಿ, ಸುಬಲಕ್ಷ್ಮಿ, ದಿವ್ಯಶ್ರೀ ಹಾಗೂ ಸೋನಿತ ಟೀಚರ್ ಉಪಸ್ಥಿತರಿದ್ದರು.
ಮನವಿ ನೀಡಲಾದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯದೊರಕಿಸುವುದಾಗಿ ರಾಜ್ಯ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಈ ಸಂದರ್ಭ ನಿಯೋಗಕ್ಕೆ ಭರವಸೆ ನೀಡಿರುವರು.


