ಬದಿಯಡ್ಕ: ಬಹು ನಿರೀಕ್ಷಿತ ನೀರ್ಚಾಲು ಖಂಡಿಗೆ ಮದಕ ಪುನರ್ ನಿರ್ಮಾಣ ಕೆಲಸಗಳನ್ನು ಅವಲೋಕನಗೈಯಲು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ರವರ ತಂಡ ಗುರುವಾರ ಯೋಜನಾ ಸ್ಥಳವನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿತು.
ನಿರ್ಮಾಣಗೊಳ್ಳುತ್ತಿರುವ ಬೃಹತ್ ಜಲಸಂರಕ್ಷಣಾ ಯೋಜನೆಯಿಂದ ನೀರ್ಚಾಲು ಆಸುಪಾಸಿನ ಪ್ರದೇಶಗಳ ಜಲಕ್ಷಾಮಕ್ಕೆ ಪರಿಹಾರ ಸಿಗಲಿದೆ. ಜಲ ಅತ್ಯಮೂಲ್ಯವಾಗಿದ್ದು ಮಳೆಗಾಲದ ನೀರನ್ನು ಸಂರಕ್ಷಿಸಿ ಇಡಬಲ್ಲ ಬೃಹತ್ ಪಾತ್ರೆ ನಶಿಸಿ ಹೋಗಿದ್ದ ಇತಿಹಾಸ ಪ್ರಸಿದ್ಧ ನೀರ್ಚಾಲು ಖಂಡಿಗೆ ಮದಕವಾಗಿದೆ. ಕೇರಳ ಸರ್ಕಾರದ ಕೃಷಿ ಇಲಾಖೆ ಸಚಿವರಿಗೆ 2012ರಲ್ಲಿ ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರಾದ ಯಂ.ಯಚ್ ಜನಾರ್ಧನರವರು ಮನವಿ ಸಲ್ಲಿಸಿ ನಿರಂತರ ಶ್ರಮವಹಿಸಿ ಸಚಿವ ಸಂಪುಟದ ಅಂಗೀಕಾರ ಪಡೆದು 1 ಕೋಟಿ 10 ಲಕ್ಷ ರೂ. ನಿಧಿಯನ್ನು ಈ ಮದಕ ಪುನರ್ ನವೀಕರಣಕ್ಕಾಗಿ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಕಾಸರಗೋಡು ಜಿಲ್ಲೆಯಲ್ಲೇ ಅತ್ಯಂತ ಸುಂದರವಾದ ಸಾಗರವನ್ನು ಹೋಲುವ ಸರ್ವರ ನಿರೀಕ್ಷೆಗೆ ಮಿಗಿಲಾದ ಜಲಾಶಯವು ಬದಿಯಡ್ಕ ಪಂಚಾಯತಿನ ಅಭಿವೃದ್ಧಿಯಲ್ಲಿ ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ಥಾನ ಗಳಿಸಲಿದೆ ಎಂದರೆ ಅತಿಶಯೋಕ್ತಿಯಲ್ಲ.
ಮರು ನಿರ್ಮಾಣಗೊಳ್ಳುತ್ತಿರುವ ಸರೋವರವು 156 ಮೀಟರ್ ಉದ್ದ, 20 ಮೀಟರ್ ಅಗಲದಲ್ಲಿ 51/2 ಮೀಟರ್ ಆಳಗೊಳಿಸಿ ಕೆರೆಯ ಸುತ್ತು ಕಬ್ಬಿಣದ ಬೇಲಿ ನಿರ್ಮಿಸಿ, ಮಳೆನೀರು ಮಾಲಿನ್ಯರಹಿತ ಸಂಗ್ರಹಿಸುವರೇ ಎರಡು ರೀಚಾರ್ಜು ಪಿಟ್ನ ನಿರ್ಮಾಣವು ಅಂತಿಮ ಘಟ್ಟ ತಲುಪಿರುತ್ತದೆ. ಕೆರೆಯ ಪುನರ್ ನಿರ್ಮಾಣದ ಪೂರ್ಣ ಜವಾಬ್ದಾರಿಯು ಕೇರಳ ಭೂ ಅಭಿವೃದ್ಧಿ ನಿಗಮ ವಡಗರ ಸಂಸ್ಥೆಯು ವಹಿಸಿಕೊಂಡಿದೆ. ಕೇರಳ ಭೂ ಅಭಿವೃದ್ಧಿ ನಿಗಮದ ತಿರುವನಂತಪುರ ಕಾರ್ಯಾಲಯದ ಆಡಳಿತ ನಿರ್ದೇಶಕರ ನಿರ್ದೇಶನದಲ್ಲಿ, ತ್ರಿಶೂರ್ನ ಮುಖ್ಯ ಕಛೇರಿಯ ನಿರ್ಮಾಣ ಅಭಿಯಂತರರ ಉಸ್ತುವಾರಿಯಲ್ಲಿ, ವಡಗರ ಕಛೇರಿಯ ಹಿರಿಯ ಯೋಜನಾ ಅಭಿಯಂತರರ ಮಾರ್ಗದರ್ಶನದಲ್ಲಿ ಸುಂದರವಾದ ಕೆರೆ ನಿರ್ಮಾಣಗೊಳ್ಳುತ್ತಿದೆ.
2018 ಮಾರ್ಚ್ 22ರಂದು ಮದಕ ಪ್ರದೇಶದಲ್ಲಿ ವಿಶ್ವ ಜಲದಿನಾಚರಣೆಯಂದು ಜಲಸಂರಕ್ಷಣೆಯ ಪ್ರತಿಜ್ಞೆಗೈದಿರುವುದು ಸ್ಮರಣೀಯವಾಗಿದೆ. ಅವಲೋಕನಾ ತಂಡದೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಗ್ರಾಮ ಪಂಚಾಯತಿ ಯೋಜನಾ ಸಮಿತಿ ಉಪಾಧ್ಯಕ್ಷ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಕೆ.ಎಲ್.ಡಿ.ಸಿ. ಸಂಸ್ಥೆಯ ಸಹಾಯಕ ಅಭಿಯಂತರ ಎನ್. ಅನು, ಗ್ರಾ.ಪಂ. ಯೋಜನಾ ಸಮಿತಿ ಸದಸ್ಯರೂ, ಕೆರೆ ನಿರ್ಮಾಣ ಸಮಿತಿ ಸಂಚಾಲಕ ಯಂ.ಯಚ್. ಜನಾರ್ಧನ, ಗ್ರಾ.ಪಂ. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಎನ್. ಭಾಸ್ಕರ ಕೋಟೂರು, ಗಣೇಶ್ ಮಣಿಯಾಣಿ ಮಲ್ಲಡ್ಕ, ರಾಮದಾಸ್ ಶ್ಯಾನ್ಭಾಗ್ ಮೊದಲಾದವರು ಉಪಸ್ಥಿತರಿದ್ದರು.
ಅಭಿಮತ
2012ರಲ್ಲಿ ಅಂದಿನ ಕೃಷಿ ಸಚಿವರಾದ ಕೆ.ಪಿ. ಮೋಹನ್ ಅವರು ಮದಕ ಸಂದರ್ಶಿಸಿ, ಭತ್ತ ಹಾಗೂ ಇತರ ಕೃಷಿಗೆ ಜಲಕ್ಷಾಮ ಪರಿಹರಿಸುವ ನಿಟ್ಟಿನಲ್ಲಿ ನೀಡಿದ ಭಾವನಾತ್ಮಕ ಭರವಸೆಯು ಮುಂದೆ ಕ್ಯಾಬಿನೆಟ್ ತೀರ್ಮಾನ, ಫಂಡ್ ಬಿಡುಗಡೆ ಪ್ರಸ್ತುತ ಸರೋವರ ನಿರ್ಮಾಣ ಅಂತಿಮಗೊಳ್ಳುತ್ತಿರುವುದು ಸಾರ್ಥಕತೆಯ ಭಾವ ಉಂಟುಮಾಡಿದೆ. ಇದರ ಪೂರ್ಣ ಋಣ ಮಾಜಿ ಸಚಿವ ಕೆ.ಪಿ. ಮೋಹನ್ ಅವರಿಗೆ ಸಲ್ಲುತ್ತದೆ.
- ಯಂ.ಎಚ್. ಜನಾರ್ಧನ
ಸಂಚಾಲಕರು, ಮದಕ ನಿರ್ಮಾಣ ಸಮಿತಿ.
..........................................................................................................................................
ನೀರ್ಚಾಲು ಖಂಡಿಗೆ ಮದಕ ಪುನರ್ನಿರ್ಮಾಣಗೊಳ್ಳುತ್ತಿರುವುದು ಅತ್ಯಂತ ಖುಷಿ ನೀಡಿದೆ. ಬೃಹತ್ ಜಲಾಶಯವು ನೀರ್ಚಾಲು ಹೊರತಾಗಿ ಓಣಿಯಡ್ಕ, ಮಾನ್ಯ, ಪುದುಕೋಳಿ, ಏಣಿಯರ್ಪು, ಖಂಡಿಗೆ ಪ್ರದೇಶಗಳ ಅಂತರ್ಜಲ ಮಟ್ಟ ವೃದ್ಧಿಗೆ ಖಂಡಿತಾ ಕಾರಣವಾಗಲಿದೆ. ಕೆರೆ ನಿರ್ಮಾಣಕ್ಕೆ ನಿರಂತರ ಎಂಟು ವರ್ಷಗಳ ಕಾಲ ಶ್ರಮಿಸಿದ ಯಂ.ಎಚ್. ಜನಾರ್ಧನರವರಿಗೆ ಗ್ರಾಮ ಪಂಚಾಯತಿ ವತಿಯಿಂದ ಪೂರ್ಣ ಸಹಕಾರವನ್ನು ನೀಡಲಾಗಿದೆ. ಇಂತಹ ಭಗೀರಥ ಯತ್ನ ಎಲ್ಲೆಡೆ ತುರ್ತು ಆಗಬೇಕು.ಅಂತಹ ಪ್ರೇರಣೆಗೆ ಜನರು ತೆರೆದುಕೊಳ್ಳಬೇಕು.
-ಕೆ.ಎನ್. ಕೃಷ್ಣ ಭಟ್.
ಅಧ್ಯಕ್ಷರು
ಬದಿಯಡ್ಕ ಗ್ರಾಮ ಪಂಚಾಯತಿ.


