ಕಾಸರಗೋಡು: ಕೊರೋನಾದಂತಹ ಮಾರಕ ವೈರಸ್ ವ್ಯಾಪಿಸುತ್ತಿರುವ ಮಧ್ಯೆ, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಟ್ಟುಸೇರಿಸಿಕೊಂಡು ಶೇಂದಿ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ಯೂತ್ ಕಾಂಗ್ರೆಸ್ ಮತ್ತು ಯೂತ್ ಲೀಗ್ ಕಾರ್ಯಕರ್ತರು ಶುಕ್ರವಾರ ಮುತ್ತಿಗೆ ನಡೆಸಿದರು.
ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ಲಾಟಿಪ್ರಹಾರ ನಡೆಸಿದರು. ಪ್ರತಿಭಟನೆ ನಡೆಯುವ ಬಗ್ಗೆ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಸಿ.ಐ ಮನೋಜ್ ಕುಮರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಾರಕ ವೈರಸ್ ಹರಡುತ್ತಿದ್ದರೆ, ಈ ಬಗ್ಗೆ ಜಾಗ್ರತೆ ಪಾಲಿಸಲು ಕರೆ ನೀಡುತ್ತಿರುವ ಸರ್ಕಾರ, ಇನ್ನೊಂದೆಡೆ ಈ ಆದೇಶ ಉಲ್ಲಂಘಿಸುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶೇಂದಿ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸುವ ಅಗತ್ಯವೇನಿತ್ತು ಎಂದು ಯುವಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ.

