ಬದಿಯಡ್ಕ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ರೋಗಮುಕ್ತಗೊಳಿಸಿದ ಬಳಿಕ 14 ದಿನಗಳ ಕಾಲ ಮನೆಯಲ್ಲಿ ಕ್ವಾರೆಂಟೈನ್ನಲ್ಲಿ ಕಳೆಯುತ್ತಿದ್ದ ಸಂದರ್ಭದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ಫಿಶಿಸಿಯನ್ ಡಾ.ಸಿ.ಎಚ್.ಜನಾರ್ಧನ ನಾಯ್ಕ್ ಕ್ವಾರೆಂಟೈನ್ ಕಾಲಾವಧಿಯಲ್ಲಿ ಎರಡು ಪುಸ್ತಕಗಳನ್ನು ರಚಿಸಿದ್ದಾರೆ.
ಒಂದು ಪುಸ್ತಕ ಕೋವಿಡ್ ಕುರಿತಾದ ಅಧ್ಯಯನ ಕೃತಿಯಾಗಿದ್ದರೆ, ಇನ್ನೊಂದರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಥೆಯನ್ನು ರಚಿಸಿದ್ದಾರೆ. ಈ ಎರಡೂ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕೊರೊನಾ ನಿಯಂತ್ರಣಗಳ ಬಳಿಕ ಪುಸ್ತಕ ರೂಪದಲ್ಲಿ ಕೃತಿಗಳನ್ನು ಪ್ರಕಟಿಸಲಾಗುವುದೆಂದು ಡಾ.ಸಿ.ಎಚ್.ಜನಾರ್ಧನ ತಿಳಿಸಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು, ಪುರಸ್ಕಾರಗಳನ್ನು ಪಡೆದಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನೀಡಿದ ಕೋವಿಡ್ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ಡಾ.ಜನಾರ್ಧನ ನಾಯ್ಕ್ ಸಹಿತ ವೈದ್ಯರ ತಂಡವನ್ನು ಶ್ಲಾಘಿಸಿದೆ.


