ಪೆರ್ಲ: ಕೊರೊನಾ ಮಾಹಾಮಾರಿಯ ವಿರುದ್ಧ ಸಮರ ಸಾರಿ ಜನಜಾಗೃತಿ, ಸೇವೆಯಲ್ಲಿ ಮನೆಮನೆಗಳನ್ನೂ ಸಂಪರ್ಕಿಸುವ ನೈಜ ಸೇನಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಣ್ಮಕಜೆ ಗ್ರಾಮ ಪಂಚಾಯತಿಯ 15ನೇ ವಾರ್ಡ್ ಬಜಕ್ಕೂಡ್ಲು ಪ್ರದೇಶದ ಜವಾಬ್ದಾರಿ ಹೊಂದಿರುವ ಆಶಾ ಕಾರ್ಯಕರ್ತೆ ಅಕ್ಕಮಕ್ಕ ಗಮನ ಸೆಳೆದಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಎಲ್ಲವರೂ ಲಾಕ್ ಡೌನ್ ಹೆಸರಿನಲ್ಲಿ ಮನೆಯೊಳಗೆ ಬೆಚ್ಚಗಿದ್ದರೆ ಜನರ ರಕ್ಷಣೆಗಾಗಿ ಅಕ್ಷರಶಃ ಬೀದಿ ಹೋರಾಟ ನಡೆಸುತ್ತಿರುವವರು ಆಶಾ ಕಾರ್ಯಕರ್ತೆಯಾಗಿರುವ ಅಕ್ಕಮಕ್ಕನವರು.
ತನ್ನ ವ್ಯಾಪ್ತಿಯ ಪ್ರತಿ ಮನೆಯಲ್ಲಿ ಕೋವಿಡ್ ಶಂಕಿತರು, ಬಾಧಿತರು, ಸಂಪರ್ಕದಲ್ಲಿರುವವರು ಯಾರೆಲ್ಲ ಇದ್ದಾರೆ, ಯಾರಿಗಾದರೂ ಜ್ವರ, ಕೆಮ್ಮು ಮೊದಲಾದ ಕೊರೊನಾ ಲಕ್ಷಣಗಳಿವೆಯಾ? ಮನೆಗೆ ಬೇರೆ ಊರಿನಿಂದ ಯಾರಾದರೂ ಬಂದಿದ್ದಾರಾ ಎಂಬೆಲ್ಲ ಮಾಹಿತಿಗಳನ್ನು ದಾಖಲಿಸಿಕೊಂಡು ಆರೋಗ್ಯ ಇಲಾಖೆಗೆ ಮಾಹಿತಿ ನೀಡುವ ಜೊತೆಜೊತೆಗೆ ಕೊರೊನಾ ಹರಡದಂತೆ ನಾವು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳೇನು, ಸಾಮಾಜಿಕ ಅಂತರ ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದನ್ನೂ ಸುಡು ಬಿಸಿಲನ್ನು ಲೆಕ್ಕಿಸದೇ ದಿನಕ್ಕೆ ಐದಾರು ಕಿ.ಮೀ. ಕಾಲ್ನಡಿಗೆಯಲ್ಲೇ ಸಂಚರಿಸಿ ಪ್ರತಿಯೋರ್ವರಲ್ಲೂ ಜಾಗೃತಿಯನ್ನು ಮೂಡಿಸುತ್ತಿರುವವರು ಈ ಅಕ್ಕಮಕ್ಕ.
ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದರ ಹಿಂದೆ ಆಶಾ ಕಾರ್ಯಕರ್ತೆಯರ ಪಾಲು ಹಿರಿದು ಎನ್ನುವುದನ್ನು ಸ್ವತಃ ಪ್ರಧಾನಿಯವರೇ ಕೊಂಡಾಡಿರುವುದು ಇವರ ಕರ್ತವ್ಯನಿಷ್ಠೆಗೊಂದು ಸಾಕ್ಷಿ. ಇಂತಹ ಸಂಕಷ್ಟದ ಸಮಯದಲ್ಲೂ ತನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಾ, ದಣಿವರಿಯದೆ ತನ್ನ ಕರ್ತವ್ಯವನ್ನು ಮೆರೆಯುತ್ತ ಕೊರೊನಾ ಎಂಬ ಹೆಮ್ಮಾರಿಯ ವಿರುದ್ಧ ನೈಜ ಸೇನಾನಿಯಾಗಿ ಹೋರಾಡುತ್ತಿರುವ ಅಕ್ಕಮಕ್ಕ ಹಾಗೂ ಅಕ್ಕಮಕ್ಕನಂತೆ ಬೀದಿ ಬೀದಿ ಸುತ್ತಿ ಈ ಅಘೋಷಿತ ಯುದ್ಧದಲ್ಲಿ ಹೋರಾಡುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರೂ ಜನಸಾಮಾನ್ಯರ ಪಾಲಿನ ದೇವರಾಗಿ ಕಾಣಬರುತ್ತಿದ್ದಾರೆ.


