ಕಾಸರಗೋಡು: ಕೋವಿಡ್ ಪ್ರತಿರೋಧ ಪ್ರಕ್ರಿಯೆಯಲ್ಲಿ ಕಾಸರಗೋಡು ಜಿಲ್ಲೆ ದೇಶಕ್ಕೇ ಮಾದರಿಯಾಗಿದೆ ಎಂದು ಕೇಂದ್ರ ಸರ್ಕಾರ ಶ್ಲಾಘಿಸಿದೆ.
ಕಾಸರಗೋಡು ಜಿಲ್ಲೆ ಕೋವಿಡ್ ಹಾಟ್ಸ್ಪೋಟ್ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ನಿಕರವಾದ ನಿಯಂತ್ರಣಗಳ ಮೂಲಕ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿದೆ. ಕೋವಿಡ್ ರೋಗವನ್ನು ನಿಯಂತ್ರಿಸುವಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳು ಶ್ಲಾಘನೀಯವಾಗಿದೆ ಎಂದು ಕೇಂದ್ರ ಸರ್ಕಾರ ಶ್ಲಾಘಿಸಿದ್ದು ಅಭಿನಂದನಾರ್ಹವಾಗಿದೆ ಎಂದಿದೆ. ಒಟ್ಟು ಜನಸಂಖ್ಯೆಯ ಶೇ.15.3 ಅನಿವಾಸಿ ಭಾರತೀಯರಾಗಿದ್ದು, ವಿದೇಶದಿಂದ ಬಂದವರೆಲ್ಲರನ್ನು ಪತ್ತೆಹಚ್ಚಿ ಕ್ವಾರೆಂಟೈನ್ಗೊಳಿಸಿದ ಕ್ರಮವೂ ಸಹಿತ ಕಾಸರಗೋಡಿನಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಡಳಿತೆ, ಪೆÇಲೀಸ್ ರ ಸೇವೆ ಸ್ತುತ್ಯರ್ಹವಾಗಿದೆ ಎಂದು ಕೇಂದ್ರ ಸರ್ಕಾರ ಶ್ಲಾಘಿಸಿದೆ.
ಈಗಾಗಲೇ ಜಿಲ್ಲೆಯಲ್ಲಿ ಶೇ.54 ರಷ್ಟು ರೋಗದಿಂದ ಗುಣಮುಖರಾಗಿದ್ದಾರೆ. ಈ ತನಕ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವು ವರದಿಯಾಗಿಲ್ಲ. ಕೇರಳದ ರಾಜಧಾನಿಯಿಂದ ಬಹಳಷ್ಟು ದೂರದಲ್ಲಿದ್ದು, ದೊಡ್ಡ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರಿದ್ದರೂ ಸರಿಯಾದ ದಿಸೆಯಲ್ಲಿ ಕ್ರಮ ತೆಗೆದುಕೊಂಡಿದ್ದರಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶ್ಲಾಘಿಸಿದೆ. ರಾಜ್ಯ ಸರ್ಕಾರ ಕಾಸರಗೋಡಿಗೆ ಸ್ಪೆಷಲ್ ಅಧಿಕಾರಿಯನ್ನು ನೇಮಿಸಿತ್ತು. ಕಾಂಟೆಕ್ಟ್ ಟ್ರೇಸಿಂಗಾಗಿ ಜೀಯೋ ಸ್ಪೆಷಲ್ ಟ್ರಾಕಿಂಗ್ ನಡೆಸಿತು. ವೈರಸ್ ಸೋಂಕು ತಡೆಯಲು ಬ್ರೇಕ್ ದಿ ಚೈನ್ ಅಭಿಯಾನ ಸಕ್ರಿಯಗೊಳಿಸಲಾಯಿತು. ಮನೆ ಮನೆಗಳಿಗೆ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ತಲುಪಿಸಲಾಯಿತು. ಕಾಸರಗೋಡಿಗೆ ಸ್ಪೆಷಲಿಸ್ಟ್ ತಜ್ಞ ವೈದ್ಯರನ್ನು, ಸಿಬ್ಬಂದಿಗಳನ್ನು, ದಾದಿಯರನ್ನು ಕಳುಹಿಸಿಕೊಟ್ಟಿತು. ಕಾಸರಗೋಡಿನಲ್ಲಿ ಪ್ರತ್ಯೇಕ ಕೋವಿಡ್ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಯಿತು. 17,3723 ಮಂದಿ ಮನೆಗಳಲ್ಲಿ ನಿಗಾದಲ್ಲಿರಿಸಲಾಯಿತು. ಶೆಲ್ಟರ್ ಹೋಂಗಳನ್ನು, ಕಮ್ಯೂನಿಟಿ ಕಿಚ್ಚನ್ ಸಜ್ಜುಗೊಳಿಸಲಾಯಿತು. ಎಲ್ಲಾ ರೀತಿಯಲ್ಲೂ ತಪಾಸಣೆಯನ್ನು ಕಠಿಣಗೊಳಿಸಲಾಯಿತು. ಮಾನವೀಯತೆ ತೋರಲಾಯಿತು. ಇವುಗಳ ಫಲವಾಗಿ ಕಾಸರಗೋಡು ದೇಶಕ್ಕೇ ಮಾದರಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶ್ಲಾಘಿಸಿದೆ.


