ನವದೆಹಲಿ: ಮಾರಕ ಕೊರೋನಾವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮೇ 3ರವರೆಗೂ ಜಾರಿಯಲ್ಲಿರುವ ಲಾಕ್ ಡೌನ್ ನ್ನು ವಿಸ್ತರಿಸಬೇಕೆಂಬುದು ಹಲವು ರಾಜ್ಯಗಳ ಇಂಗಿತವಾಗಿದೆ.
ಲಾಕ್ ಡೌನ್ ವಿಸ್ತರಣೆ ಮಾಡಬೇಕಾ? ಅಥವಾ ಬೇಡವೇ? ಎಂಬುದರ ಬಗ್ಗೆ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಲಿರುವ ವಿಡಿಯೋ ಕಾನ್ಫರೆನ್ಸ್ ಬಳಿಕ ನಿರ್ಧಾರವಾಗಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗಿರುವಂತೆ ಮೇ 16ರವರೆಗೂ ಲಾಕ್ ಡೌನ್ ವಿಸ್ತರಿಸಬೇಕೆಂದು ದೆಹಲಿ ಸರ್ಕಾರದ ಕೋವಿಡ್-19 ಕಮಿಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಕಂಟೈನ್ ಮೆಂಟ್ ಜೊನ್ ಗಳಿದ್ದು, ಮೇ 16ರವರೆಗೂ ಲಾಕ್ ಡೌನ್ ವಿಸ್ತರಿಸಬೇಕೆಂದು ದೆಹಲಿ ಸರ್ಕಾರದ ಕೋವಿಡ್-19 ನಿಗ್ರಹ ಸಮಿತಿಯ ಅಧ್ಯಕ್ಷ ಎಸ್. ಕೆ. ಸರಿನ್ ಆಗ್ರಹಿಸಿದ್ದಾರೆ. ಪ್ರಸ್ತುತ ಇರುವ ಮಾರ್ಗಸೂಚಿ ಹಾಗೂ ನಿಯಮಗಳು ಮೇ 7ರವರೆಗೂ ಮುಂದುವರೆಯಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಕೊರೋನಾವೈರಸ್ ಸೋಂಕು ಪ್ರಕರಣ ಹೆಚ್ಚಾಗಿ ಕಂಡುಬಂದಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಒಡಿಶಾ ರಾಜ್ಯಗಳು ಹಾಟ್ ಸ್ಪಾಟ್ ಗಳಲ್ಲಿ ಮೇ 3ರ ನಂತರವೂ ಲಾಕ್ ಡೌನ್ ವಿಸ್ತರಿಸಲು ಚಿಂತನೆ ನಡೆಸಿವೆ. ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಎದುರು ನೋಡುತ್ತಿದ್ದರೆ ಅಸ್ಸಾಂ, ಕೇರಳ ಮತ್ತು ಬಿಹಾರ ರಾಜ್ಯಗಳು ಸೋಮವಾರ ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫೆರನ್ಸ್ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿವೆ
ಇಂದು ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚರ್ಚಿಸಿದ ಬಳಿಕ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪ್ ತಿಳಿಸಿದ್ದಾರೆ. ಅಹಮದಾಬಾದ್, ಸೂರತ್, ಹೈದ್ರಾಬಾದ್, ಚೆನ್ನೈ ಮತ್ತು ಠಾಣೆಯಲ್ಲಿ ಕೋವಿಡ್-19 ಪರಿಸ್ಥಿತಿ ಗಂಭೀರವಾಗಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದ್ದು, ಲಾಕ್ ಡೌನ್ ವಿಸ್ತರಣೆ ಮಾಡಬೇಕಾ ಅಥವಾ ಬೇಡವೇ ಎಂಬುದರ ಬಗ್ಗೆ ನಾಳೆ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.