ಉಪ್ಪಳ: ಪೈವಳಿಕೆ ಗ್ರಾ.ಪಂ. ಸದಸ್ಯೆಯೊಬ್ಬರಿಗೆ ತನ್ನ ಪತಿಯ ಮೂಲಕ ಅಂಟಿದ ಕೋವಿಡ್ ಖಚಿತಗೊಂಡ ಕಾರಣ ಗ್ರಾ.ಪಂ. ಇದೀಗ ಸಂಪೂರ್ಣ ಮುಚ್ಚಲ್ಪಟ್ಟಿರುವುದರೊಂದಿಗೆ ದೇಶದಲ್ಲೇ ಗ್ರಾ.ಪಂ. ಒಂದು ಕೋವಿಡ್ ಕಾರಣ ಸ್ತಬ್ದಗೊಳ್ಳ ಬೇಕಾದ ಸ್ಥಿತಿಗೆ ಪಾತ್ರವಾಯಿತು.
ಪೈವಳಿಕೆ ಗ್ರಾ.ಪಂ.ನ ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ, ಮಾಜಿ ಅಧ್ಯಕ್ಷ, ಇತರ ಸದಸ್ಯರು, ನೌಕರರು, ಗ್ರಾ.ಪಂ. ವಾಹನದ ಚಾಲಕ ಹೀಗೆ ಎಲ್ಲರೂ ಕ್ವಾರಂಟೈನ್ ಗೆ ಒಳಗಾಗಿರುವುದರಿಂದ ಗ್ರಾ.ಪಂ. ಸಂಪೂರ್ಣ ಸ್ತಬ್ದವಾಗಬೇಕಾಯಿತು. ಗುರುವಾರ ಹೊರಬಂದ ಕೊರೊನಾ ವರದಿಯಂತೆ ಪೈವಳಿಕೆ ಗ್ರಾ.ಪಂ.ನ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷನೂ, ಪ್ರಸ್ತುತ ರಾಜಕೀಯ ಪಕ್ಷವೊಂದರ ನೇತಾರನೂ ಆಗಿರುವ ವ್ಯಕ್ತಿಯಿಂದ ಪ್ರಸ್ತುತ ಗ್ರಾ.ಪಂ. ಸದಸ್ಯೆಯಾಗಿರುವ ತನ್ನ ಪತ್ನಿ, ಇಬ್ಬರು ಮಕ್ಕಳಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಗ್ರಾ.ಪಂ. ಸದಸ್ಯರು, ಉದ್ಯೋಗಸ್ಥರು ಸಂಪೂರ್ಣ ಕ್ವಾರಂಟೈನ್ ಗೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣವಾಯಿತು. ಪತಿಯಿಂದ ಕೋವಿಡ್ ತಗಲಿಸಿಕೊಂಡ ಸದಸ್ಯೆಯಾದ ಆತನ ಪತ್ನಿ ಹಲವು ಬಾರಿ ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿದ್ದರಿಂದ ಗ್ರಾ.ಪಂ. ಕಚೇರಿಯ ಇತರರಿಗೂ ಕೋವಿಡ್ ಬಾಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೆ ಸೂಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪೈವಳಿಕೆ ಗ್ರಾ.ಪಂ. ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವಂಖತೆ ಅಧಿಕೃತರಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯತಿಯೊಂದು ಮುಚ್ಚಬೇಕಾದ ಸ್ಥಿತಿಗೆ ಒಳಗಾಗಬೇಕಾಯಿತು.
ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿಸೋಜ, ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಎಸ್.ಭಟ್, ಗ್ರಾ.ಪಂ. ಕಾರ್ಯದರ್ಶಿ ರಾಜೀವನ್, ಚಾಲಕ ಹಮೀದ್ ಅವರನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ. ಇವರು ಶುಕ್ರವಾರ ಮಧ್ಯಾಹ್ನ ಕಾಸರಗೋಡು ಜನರಲ್ ಆಸ್ಪತ್ರೆಗೆ ಆಗಮಿಸಿ ಮೊದಲ ಕೊರೊನಾ ಪರೀಕ್ಷೆಗೆ ಒಳಗಾದರು. ಮೇ.7 ರಂದು ಗ್ರಾ.ಪಂ.ನಲ್ಲಿ ನಡೆದ ಮುಖ್ಯಮಂತ್ರಿಗಳ ವೀಡಿಯೋ ಕಾನ್ಪರೆನ್ಸ್ ನಲ್ಲಿ ರೋಗಬಾಧಿತರಾದ ಗ್ರಾ.ಪಂ. ಸದಸ್ಯೆಯೋರ್ವೆ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಅಂದಿನ ವೀಡಿಯೋ ಕಾನ್ಪರೆನ್ಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸದಸ್ಯರನ್ನೂ ನಿರೀಕ್ಷಣೆಯಲ್ಲಿ ಇರಿಸಲು ಸೂಚಿಸಲಾಗಿದೆ.


