ಮಂಜೇಶ್ವರ: ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ವತಿಯಿಂದ ಗ್ರಾಮೀಣ ಪ್ರದೇಶವಾದ ಬದಿಯಡ್ಕ ಗ್ರಾಮ ಪಂಚಾಯತಿ ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಆಶ್ರಯ ಅಭಯ ಆಶ್ರಮಕ್ಕೆ ಸ್ಯಾನಿಟರಿ ಪ್ಯಾಡ್ ನ್ನು ಶುಕ್ರವಾರ ವಿತರಿಸಲಾಯಿತು.
ಬಿಜೆಪಿ ಕರ್ನಾಟಕ ರಾಜ್ಯ ಸಣ್ಣ ಮಧ್ಯಮ ಕೈಗಾರಿಕಾ ಸಹ ಸಂಚಾಲಕ ಬದರಿನಾಥ್ ಕಾಮತ್ ಮಂಗಳೂರು ಅವರು ಕೊಡಮಾಡಿದ ಈ ಸ್ಯಾನಿಟರಿ ಪ್ಯಾಡ್ ನ್ನು ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ನ ಸಂಚಾಲಕ, ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಅವರು ಆಶ್ರಯದ ವಿಶ್ವಸ್ಥ ಮಂಡಳಿಯ ನಿರ್ದೇಶಕ ಗಣೇಶ್ ಭಟ್ ಅಳಕ್ಕೆ ಅವರಿಗೆ ವಿತರಿಸುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು.
ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ನ ಸಂಸ್ಥಾಪಕ ರತನ್ ಕುಮಾರ್ ಹೊಸಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ವೇಳೆ ಸ್ಕಂದ ಹೆಲ್ಪ್ ಡೆಸ್ಕ್ ನ ಪ್ರಧಾನ ಸಂಚಾಲಕ ಸುಖೇಶ್ ಬೆಜ್ಜ, ಬಾಲಕೃಷ್ಣ ಮಜಿಬೈಲ್ ಕಟ್ಟೆ, ಯುವಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಕಿಶೋರ್ ಭಗವತೀ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಒಂದು ತಿಂಗಳಿನಿಂದ ದೇಶ ವ್ಯಾಪಿ ಲಾಕ್ ಡೌನ್ ಘೋಷಿಸಿರುವುದರಿಂದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿಯದಂತಾಗಿದೆ. ಈ ಸಂದರ್ಭದಲ್ಲಿ ಹೆಣ್ಮಕ್ಕಳ ಅಗತ್ಯ ವಸ್ತುಗಳಲ್ಲೊಂದಾದ ಸಾನಿಟರಿ ಪ್ಯಾಡ್ಗಳನ್ನು ವಿತರಿಸಲಾಯಿತು. ಹಲವು ಮದ್ದಿನ ಅಂಗಡಿಗಳಲ್ಲಿ ದಾಸ್ತಾನು ಕಡಿಮೆ ಇರುವುದರಿಂದ ಪ್ಯಾಡ್ ಲಭಿಸುವುದೇ ಇದೀಗ ಸಮಸ್ಯೆಯಾಗಿದೆ. ಈ ಬಗ್ಗೆ ಮಂಗಳೂರಿನ ವಜ್ರಿ ಟೆಕ್ ಸಂಸ್ಥೆಗೆ ಹಾಗೂ ಮಂಜೇಶ್ವರದ ಸ್ಕಂದ ಹೆಲ್ಪ್ ಡೆಸ್ಕ್ ಗೆ ಹಲವು ಮಹಿಳಾ ಸಂಸ್ಥೆಗಳಿಂದ ಬೇಡಿಕೆ ಬಂದಿರುವ ಮೇರೆಗೆ ಬಿಜೆಪಿ ಕರ್ನಾಟಕ ರಾಜ್ಯ ಸಣ್ಣ ಮಧ್ಯಮ ಕೈಗಾರಿಕಾ ಸಹ ಸಂಚಾಲಕ ಬದರಿನಾಥ್ ಕಾಮತ್ ಮಂಗಳೂರು ಅವರು ಸಾನಿಟರಿ ಪ್ಯಾಡ್ ನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ ಕಾಸರಗೋಡು ಜಿಲ್ಲೆಗೆ ಉಚಿತವಾಗಿ ನೀಡಿದ್ದರು.
ಇದೇ ವೇಳೆ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ಕಂದ ಹೆಲ್ಪ್ ಡೆಸ್ಕ್ ನ ಪ್ರಧಾನ ಸಂಚಾಲಕರೂ, ಹಾಗೂ ಮಂಗಳೂರಿನ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರಾದ ಅಶ್ವಿತ್ ಕುಮಾರ್ ಉಪ್ಪಳ ಮತ್ತು ಸ್ಕಂದ ಹೆಲ್ಪ್ ಡೆಸ್ಕ್ ನ ಸಂಸ್ಥಾಪಕ ರತನ್ ಕುಮಾರ್ ಹೊಸಂಗಡಿಯವರ ಜಂಟಿ ನಿರ್ದೇಶನದಂತೆ ಸ್ಯಾನಿಟರಿ ಪ್ಯಾಡ್ ವಿತರಣೆಯ ಯೋಜನೆಗೆ ಕ್ರಮ ಕೈಗೊಂಡಿದ್ದರು. ಇದರ ವಿತರಣೆಯನ್ನ ಚತುರ್ಥ ಬಾರಿಯಾಗಿ ಕನ್ನೆಪ್ಪಾಡಿಯ ಆಶ್ರಮದ ಫಲಾನುಭವಿಗಳಿಗೆ ನೀಡಲಾಯಿತು.


