ಕುಂಬಳೆ: ಬಂದ್ಯೋಡು ಚೇವಾರು ಸಮೀಪದ ಸುಬ್ಬಯ್ಯಕಟ್ಟೆ ಮಜಿಲಾರು ಎಂಬಲ್ಲಿ ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಬಾವಿಗೆ ಇಳಿದ ಸಹೋದರರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮಜಿಲಾರು ನಿವಾಸಿ ದಿ.ಐತ್ತ-ಬಾಗಿ ದಂಪತಿಗಳ ಪುತ್ರರಾದ ನಾರಾಯಣ(45) ಹಾಗೂ ಅವರ ಸಹೋದರ ಸುಳ್ಯ ತಾಲೂಕು ಕೊಲ್ಲಮೊಗರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತೀ ಕಟ್ಟ ಎಂಬವರ ಪತಿ ಶಂಕರ(32) ಮೃತಪಟ್ಟ ದುರ್ದೈವಿಗಳು.
ಅಂಗಳದಲ್ಲಿ ಮೇಯಲು ಕಟ್ಟಿಹಾಕಿದ್ದ ಕರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು ಇದನ್ನು ಗಮನಿಸಿ ಮೊದಲು ನಾರಾಯಣ ಅವರು ಕರುವನ್ನು ಮೇಲೆತ್ತಲು ಬಾವಿಗಿಳಿದು ಅಲ್ಪಹೊತ್ತಲ್ಲಿ ಪ್ರಾಣವಾಯು ಲಭ್ಯವಾಗದೆ ತೊಳಲಾಡುತ್ತಿರುವುದನ್ನು ಕಂಡು ಸಹೋದರ ಶಂಕರ ಕೂಡಾ ಬಾವಿಗಿಳಿದರು. ಇಬ್ಬರೂ ಪ್ರಾಣವಾಯು ಲಭ್ಯವಾಗದೆ ಅಸ್ವಸ್ಥಗೊಂಡು ಮೃತಪಟ್ಟರು.
ಮೃತರಾದ ನಾರಾಯಣ ಪತ್ನಿ ಹಾಗೂ ಶಂಕರ ಪತ್ನಿ, ಓರ್ವ ಸಹೋದರನ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


