ಕಾಸರಗೋಡು: ಕರೊನಾ ವೈರಸ್ ಬಾಧೆಯಿಂದ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಪೂರ್ಣ ಕಾರ್ಯಕ್ರಮಗಳು ರದ್ದಾಗಿದ್ದು, ವಿಶೇಷವೆಂಬಂತೆ ಮೊದಲ ಬಾರಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಗೂಗಲ್ ಮೀಟ್ ಮೂಲಕ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿ ಮಾಹಿತಿ ಹಂಚಿಕೊಂಡರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಲತಾಣ ಗೂಗಲ್ ಮೀಟ್ ಮೂಲಕ ಕಾಸರಗೋಡಿನ ಕನ್ನಡ ಸಾಹಿತಿಗಳೊಂದಿಗೆ ನೇರ ಸಂವಾದ ಸುಧೀರ್ಘ ಒಂದೂ ಕಾಲು ಗಂಟೆಗಳಷ್ಟು ಹೊತ್ತು ಅವಿಸ್ಮರಣೀಯತೆಗೆ ಸಾಕ್ಷಿಯಾಯಿತು. ಕರೊನಾ ಕಾರಣ ಸಾಹಿತ್ಯ ವಲಯ ಗೊಂದಲಗೊಳ್ಳುವುದು ಬೇಡ. ತಮ್ಮ ಪ್ರಖರ ಬರವಣಿಗೆಗಳ ಮೂಲಕ ಅಕ್ಷರ ಕ್ರಾಂತಿಯೆಬ್ಬಿಸಿ ಸಮಾಜವನ್ನು ಧನಾತ್ಮಕ ಶಕ್ತಿಯೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಹಿತಿಗಳು ಕಾರ್ಯನಿರ್ವಹಿಸುತ್ತಿರುವುದು ಸಾಮಾಜಿ ಜಾಲತಾಣಗಳ ಮೂಲಕ ತಿಳಿದಿರುವೆನು. ಇಂತಹ ಸಕಾರಾತ್ಮಕತೆ ಇನ್ನಷ್ಟು ವೃದ್ದಿಗೊಳ್ಳಲಿ ಎಂದು ಕೆ.ಶ್ರೀಕಾಂತ್ ಸಂವಾದದಲ್ಲಿ ತಿಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಅತಂತ್ರರಾಗಿರುವ ಕವಿ-ಸಾಹಿತಿಗಳಿಗೂ ಭರವಸೆಯ ಬೆಳಕಾಗಿ ಸರ್ಕಾರಗಳು ಆರ್ಥಿಕ ನೆರವು ನೀಡುವಂತೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಂವಾದದಲ್ಲಿ ಹಿರಿಯ ಸಾಹಿತಿಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಯುವ ಸಾಹಿತಿಗಳಾದ ಹರೀಶ್ ಸುಲಾಯ ಒಡ್ಡಂಬೆಟ್ಟು, ವಿದ್ಯಾ ಗಣೇಶ್ ಅಣಂಗೂರು, ದಯಾನಂದ ರೈ ಕಳ್ವಾಜೆ, ಪರಿಣಿತ ರವಿ ಎಡನಾಡು ಎರ್ನಾಕುಳಂ, ಶಶಿಕಲಾ ಕುಂಬಳೆ, ಶ್ರೀಶಕುಮಾರ ಪಂಜಿತ್ತಡ್ಕ ಮೊದಲಾದವರು ಪಾಲ್ಗೊಂಡರು. ಯುವ ಸಂಘಟಕ ಶ್ರೀಕಾಂತ್ ನೆಟ್ಟಣಿಗೆ ಸಮನ್ವಯಕಾರರಾಗಿ ನಿರ್ವಹಿಸಿದರು.



