ಕಾಸರಗೋಡು: ಕೇರಳ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 78.68 ಫಲಿತಾಂಶ ಲಭಿಸಿದೆ. 485 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ "ಎ" ಪ್ಲಸ್ ಪಡೆದಿದ್ದಾರೆ.
ಕಾಸರಗೊಡು ಜಿಲ್ಲೆಯ 106 ವಿದ್ಯಾಲಯಗಳ 11574 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14865 ಪರೀಕ್ಷೆಗೆ ನೋಂದಣಿ ನಡೆಸಿದ್ದು, ಇವರಲ್ಲಿ 14711 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಮುಕ್ತ ಶಾಲೆ ವಿಭಾಗದಲ್ಲಿ ಜಿಲ್ಲೆಯಲ್ಲಿ ಶೇ 50.64(1730 ವಿದ್ಯಾರ್ಥಿಗಳು)ಮಂದಿ ಪರೀಕ್ಷೆಗೆ ನೋಂದಣಿ ನಡೆಸಿದ್ದು, 1643 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 832 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ.
3 ಶಿಕ್ಷಣಾಲಯಗಳಿಗೆ ಶೇ 100 ಫಲಿತಾಂಶ:
ಜಿಲ್ಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ 3 ಶಿಕ್ಷಣಾಲಯಗಳಿಗೆ ಶೇ 100 ಫಲಿತಾಂಶ ಪಡೆದಿವೆ. ಕಾಸರಗೋಡು ಮಾರ್ತೋಮಾ ಎಚ್.ಎಸ್.ಎಸ್.ಫಾರ್ ಡಫ್, ಕಾಞಂಗಾಡ್ ಲಿಟಲ್ ಫ್ಲವರ್ ಎಚ್.ಎಸ್.ಎಸ್., ಕುನ್ನಿಲ್ ಎಜ್ಯುಕೇಷನ್ ಟ್ರಸ್ಟ್ ಎಚ್.ಎಸ್.ಎಸ್. ಕಾಸರಗೋಡು ಸಂಸ್ಥೆ ಶೇ 100 ಫಲಿತಾಂಶ ಗಳಿಸಿವೆ.
ಗಾಲಿ ಕುರ್ಚಿಯಲ್ಲಿ ಕುಳಿತು ಶ್ರೇಷ್ಠ ವಿಜಯ ಸಾಧಿಸಿದ ಸಜಿನಾ:
ಸಜಿನಾಗೆ ಗಾಲಿಕುರ್ಚಿ (ವ್ಹೀಲ್ ಛೇರ್) ಯಲ್ಲಿ ಕುಳಿತೇ ಇರಬೇಕಾದ ಸ್ಥಿತಿ ಶೈಕ್ಷಣಿಕ ಸಾಧನೆಗೆ ತಡೆಯಾಗಿಲ್ಲ. ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ 5 ವಿಷಯಗಳಲ್ಲಿ "ಎ"ಪ್ಲಸ್ ಪಡೆದು, ಶೇ 90 ಅಂಕ ಪಡೆದ ಸಜಿನಾ ನಾಡಿಗೆ ಹಿರಿಮೆ ತಂದಿದ್ದಾರೆ.
ಕಂಬಲ್ಲೂರು ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಹ್ಯೂ ಮಾನಿಟಿ ಬ್ಯಾಚ್ ಗೆ ತಮ್ಮ ಸಾಧನೆಯ ಮೂಲಕ ಹೆಮ್ಮೆ ಒದಗಿಸಿದ್ದಾರೆ. ಮಾಂಸಪೇಷಿಗಳಿಗೆ ಬಲಹೀನತೆ ಬಾಧಿಸಿದ ಪರಿಣಾಮ ಕಳೆದ ಅನೇಕ ವರ್ಷಗಳಿಂದ ಗಾಲಿಕುರ್ಚಿಗೆ ಸೀಮಿತರಾಗಿದ್ದಾರೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಪ್ರತ್ಯೇಕ ಕಾಳಜಿಯ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಗಾಲಿಕುರ್ಚಿ ಇವರಿಗೆ ಶೀಘ್ರದಲ್ಲೇ ಲಭಿಸಲಿದೆ.
ಸಹಪಾಠಿಗಳು, ಗೆಳೆಯರು, ಶಿಕ್ಷಕರು ನೀಡುತ್ತಿರುವ ಪೆÇ್ರೀತ್ಸಾಹ ಈ ಸಾಧನೆಗೆ ದೊಡ್ಡ ಯೋಗದಾನ ನೀಡಿದೆ ಎಂದು ಸಜಿನಾರ ತಾಯಿ ಪದ್ಮಿನಿ ನುಡಿದಿದ್ದಾರೆ. ತಮ್ಮ ಹತ್ತನೇ ತರಗತಿಯಿಂದ ಸಜಿನಾ ರೆಗ್ಯುಲರ್ ವಿದ್ಯಾರ್ಥಿಯಾಗಿ ಶಾಲೆಗೆ ತೆರಳತೊಡಗಿದವರು. ಹತ್ತನೇ ತರಗತಿ ಪರೀಕ್ಷೆಯಲ್ಲೂ 5 ವಿಷಯಗಳಲ್ಲಿ ಸಜಿನಾರಿಗೆ "ಎ"ಪ್ಲಸ್ ಲಭಿಸಿತ್ತು. ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಮುಂದುವರಿಸಬೇಕು ಎಂಬ ಆಸಕ್ತಿ ಹೊಂದಿದ್ದರೂ, ಆರೋಗ್ಯ ವಿಚಾರದ ಹಿನ್ನೆಲೆಯಲ್ಲಿ ಹ್ಯೂಮಾನಿಟಿ ವಿಭಾಗವನ್ನು ಆಯ್ಕೆ ಮಾಡಬೇಕಾಗಿ ಬಂದಿತ್ತು.
ಅಂಬೇಚ್ಚಾಲ್ ಎಂಬಲ್ಲಿನ ತಮ್ಮ ನಿವಾಸದಿಂದ ಬೆಳಗ್ಗೆ ಮತ್ತು ಸಂಜೆ ಆಟೋರಿಕ್ಷಾದಲ್ಲಿ ತಾಯಿ ಪದ್ಮಿನಿ ಕರೆತರುತ್ತಾರೆ. ತಂದೆ ಈ ಕುಟುಂಬದಿಂದ ಬೇರ್ಪಟ್ಟಿದ್ದು, ತಾಯಿ ರಬ್ಬರ್ ಹಾಲು ಸಂಗ್ರಹಿಸುವ ಕಾರ್ಮಿಕತನ ನಡೆಸುತ್ತಿದ್ದಾರೆ. ಅಣ್ಣ ಅಭಿಜಿತ್ ವೆಲ್ಡಿಂಗ್ ಕಾಯಕಕ್ಕೆ ತೆರಳುತ್ತಿದ್ದಾರೆ.
ಗ್ಲಾಸ್ ಪೈಂಟಿಂಗ್ ನಲ್ಲೂ ನಿಪುಣರಾಗಿರುವ ಸಜಿನಾ ಬೀಡ್ಸ್ ವರ್ಕ್ ನಲ್ಲೂ ಪರಿಣತರಾಗಿದ್ದಾರೆ. ಈ ವಿಭಾಗದ ಸಬ್ಜಿಲ್ಲಾ ಮಟ್ಟದ ಸ್ಪರ್ಧೆ ಪ್ರಥಮ ಬಹುಮಾನ ಗಳಿಸಿದ್ದರು. ಒಬ್ಬ ಮನಶಾಸ್ತ್ರಜ್ಞಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು, ಈ ಮೂಲಕ ಅನೇಕರ ಬದುಕಿಗೆ ನೆರವಾಗಬಹುದು ಎಂಬ ಆಕಾಂಕ್ಷೆ ಹೊಂದಿರುವ ಸಜಿನಾ ಹೊಂದಿದ್ದಾರೆ. ಆದರೆ ಈ ಬಯಕೆಗೆ ಮನೆಯ ಆರ್ಥಿಕಮುಗ್ಗಟ್ಟು ತೊಡಕಾಗುತ್ತಿದೆ. ಆದರೆ ಸಹೃದಯರ ಸಹಾಯ ಲಭಿಸಿದರೆ ತಮ್ಮಬದುಕಿಗೆ ಬೆಳಕಾದೀತು ಎಂಬ ನಿರೀಕ್ಷೆ ಹೊಂದಿದ್ದಾರೆ.
(ಫೆÇಟೋ ಸಜಿನಾ: ಶಿಕ್ಷಣ ಸಾಧನೆ ನಡೆಸಿರುವ ಸಜಿನಾ)


