ತಿರುವನಂತಪುರ: ಕೇರಳದ ಐತಿಹಾಸಿಕ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ, ನೆಲಮಾಳಿಗೆ ಸಂಪತ್ತು, ದೇಗುಲದ ಆಸ್ತಿ ಹಕ್ಕು ಇಡೀ ದೇಶದ ಗಮನ ಸೆಳೆದ ಪ್ರಕರಣ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರದಂದು ಮಹತ್ವದ ತೀರ್ಪು ನೀಡಿದೆ.
ಆನಂತ ಪದ್ಮನಾಭಸ್ವಾಮಿ ದೇಗುಲವು ತಿರುವಾಂಕೂರು ರಾಜ ಮನೆತನದ ಸುಪರ್ದಿಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ದೇವಸ್ಥಾನ ಸಾರ್ವಜನಿಕ ಸಂಪತ್ತಾಗಿದ್ದರೂ ರಾಜ ಕುಟುಂಬ (Travancore royal family) ಇದನ್ನು ಸ್ವಂತ ಸ್ವತ್ತು ಎಂದೇ ಭಾವಿಸಿದೆ. ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು 500 ಪುಟಗಳ ಸುದೀರ್ಘ ವರದಿಯಲ್ಲಿ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಕೋರ್ಟ್ ಗಮನ ಸೆಳೆದಿದ್ದರು.
ಕಳೆದ ಎಂಟು ಹತ್ತು ವರ್ಷಗಳ ಹಿಂದೆ ಕೇರಳದ ಅತ್ಯಂತ ಶ್ರೀಮಂತ ದೇಗುಲ ಅನಂತಪದ್ಮನಾಭ ದೇವಳಂನ ನೆಲ ಮಾಳಿಗೆಯಲ್ಲಿದ್ದ ಕೊಠಡಿಗಳನ್ನು ಪರಿಶೀಲಿಸಲಾಗಿತ್ತು. ಎರಡು ಕೊಠಡಿಗಳ ಸಂಪತ್ತಿನ ಮೌಲ್ಯ ದಾಖಲಿಸಿದಾಗ, ಅಂದಾಜು ಮೌಲ್ಯ ಒಂದು ಲಕ್ಷ ಕೋಟಿ ರು. ಮೀರಲಿದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದರು.
ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತೆರೆಯಲಾಗಿದೆ. ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನು ಬೆರಗುಗೊಳಿಸಿದೆ. ಸುಮಾರು 150 ವರ್ಷಗಳಿಂದ ರಹಸ್ಯವಾಗಿದ್ದ ಈ ಸಂಪತ್ತಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ನಡುವೆ ಬಿ ಕೊಠಡಿಯ ಬಗ್ಗೆ ಇನ್ನೂ ಸುಪ್ರೀಂಕೋರ್ಟ್ ತೀರ್ಪು ನೀಡಿಲ್ಲ. ದೇಗುಲದ ರಹಸ್ಯ ಹೊರ ತೆಗೆಯಲು ಕಾರಣಕರ್ತರಾಗಿದ್ದ ಅರ್ಜಿದಾರ ಸುಂದರರಾಜನ್ ಮೃತಪಟ್ಟಿದ್ದಾರೆ.


