ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ಬಳಿಕ ಸಾಯುವ ಪ್ರತಿಯೊಬ್ಬರನ್ನು ಕೋವಿಡ್ ಸಾವಿನ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಡಕ್ ಸಂದೇಶ ನೀಡಿದ್ದಾರೆ. ನಿನ್ನೆ ಸಂಜೆಯ ಪತ್ರಿಕಾಗೋಷ್ಠಿಯಲ್ಲಿ ಕೋವಿಡ್ ಸಾವು ಡಬ್ಲ್ಯು ಎಚ್ ಒ ಮಾನದಂಡಗಳ ಪ್ರಕಾರ ದೃಢಪಡುವುದಾದರೆ ಮಾತ್ರ ಕೋವಿಡ್ ಮರಣವೆಂಬ ಘೋಷಣೆಗೆ ಅರ್ಹವಾಗುವುದೆಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಕೋವಿಡ್ 19 ಆಸ್ಕೋಸ್ ಆಫ್ ಡೆತ್ನ ಅಂತರಾಷ್ಟ್ರೀಯ ಮಾರ್ಗಸೂಚಿಗಳ ಪ್ರಮಾಣೀಕರಣ ಮತ್ತು ವರ್ಗೀಕರಣ (ಕೋಡಿಂಗ್) ನಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ಸಾವುಗಳನ್ನು ದೃಢಪಡಿಸಲಾಗುವುದೆಂದು ಮುಖ್ಯಮಂತ್ರಿ ಹೇಳಿರುವರು.
ರೋಗ ದೃಢಪಟ್ಟರೆ ಮತ್ತು ರೋಗಿಯು ಸತ್ತರೆ ಮಾತ್ರ ಕೋವಿಡ್ -19 ಅನ್ನು ಕೋವಿಡ್ ಸಾವು ಎಂದು ಗುರುತಿಸಬಹುದು. ದೃಢಪಡಿಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಅಪಘಾತದಲ್ಲಿ ಸತ್ತರೆ ಕೋವಿಡ್ ಸಾವಾಗಿ ಪರಿಗಣಿಸಲಾಗದು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಸತ್ತರೆ ಕೋವಿಡ್-19 ಪಾಸಿಟಿವ್ ಆಗಿರುವುದರಿಂದ ಅವರು ಸತ್ತಿದ್ದಾರೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ಈ ಬಗ್ಗೆ ಆರೋಗ್ಯ ಇಲಾಖೆಯ ಸಮಿತಿಯು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸೂಚನೆ ನೀಡಿದರು.
ಏಪ್ರಿಲ್ 16 ರಂದು, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ರಿಂದ ಸಾಯುತ್ತಿರುವ ವ್ಯಕ್ತಿಯ ಸಾವಿಗೆ ಕಾರಣ ಸೇರಿದಂತೆ ಮರಣ ಪ್ರಮಾಣಪತ್ರವನ್ನು ದೃಢೀಕರಿಸಲು ಮತ್ತು ನೀಡಲು ಮಾರ್ಗಸೂಚಿಗಳನ್ನು ನೀಡಿತು. ಇತರ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ಕೋವಿಡ್ ದೃಢಪಟ್ಟ ಬಳಿಕ ಮೃತನಾದಾಗ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಸವಿಸ್ತಾರವಾಗಿ ವಿವರಿಸಿರುವ ಸುತ್ತೋಲೆಗಳು ಲಭ್ಯವಿದೆ.


