ತಿರುವನಂತಪುರ: ರಾಜ್ಯಾದ್ಯಂತ ಮನೆಮನೆಗಳಿಗೆ ತೆರಳಿ ಮೀನು ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ರಸ್ತೆಬದಿಯ ಮೀನು ಮಾರಾಟ ಮತ್ತು ಮೀನು ಹರಾಜನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕೊಲ್ಲಂ ಜಿಲ್ಲೆಯಲ್ಲಿ ಮೀನು ಮಾರಾಟವನ್ನು ನಿಷೇಧಿಸಿದ್ದರು. ಬಂದರುಗಳಲ್ಲಿ ಕೇಂದ್ರೀಕೃತವಾಗಿರುವ ಕೋವಿಡ್ ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್ -19 ರಾಜ್ಯದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತಿರುವನಂತಪುರ ಜಿಲ್ಲೆಯ ಪೂಂತುರಾ ಮತ್ತು ಪುಲ್ಲುವಿಲಾ ಪ್ರದೇಶಗಳಲ್ಲಿ ಸಮುದಾಯ ವಿಸ್ತರಣೆ ಹಂತ ತಲಪಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಘೋಷಿಸಿದ್ದರು. ತಿರುವನಂತಪುರಂನ ಕರಾವಳಿ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆಯಿಂದ ಪ್ರತಿ ಶನಿವಾರ ರಾಜ್ಯದ ಬ್ಯಾಂಕುಗಳಿಗೆ ರಜೆ ಘೋಷಿಸಿದೆ. ಇಲ್ಲಿಯವರೆಗೆ ಎರಡನೇ ಮತ್ತು ನಾಲ್ಕನೇ ಶನಿವಾರಗಳಲ್ಲಿ ಮುಚ್ಚಿರುತ್ತಿದ್ದರೆ ಮುಂದಿನ ಸೂಚನೆ ಬರುವವರೆಗೂ ಯಾವುದೇ ಶನಿವಾರದಂದು ಬ್ಯಾಂಕುಗಳು ತೆರೆದಿರುವುದಿಲ್ಲ. ಮಿಕ್ಕುಳಿದ ಬ್ಯಾಂಕ್ ಚಟುವಟಿಕೆಗಳ ದಿನಗಳಲ್ಲಿ ಸಾಮಾಜಿಕ ದೂರವನ್ನು ಗಮನಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ.
ಇದುವರೆಗೆ ರಾಜ್ಯದಲ್ಲಿ ಒಟ್ಟು 11066 ಕೋವಿಡ್ ಪ್ರಕರಣಗಳನ್ನು ದೃಢಕರಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಶನಿವಾರ ಮಾತ್ರ 591 ಜನರು ಸೋಂಖಿಗೆ ತುತ್ತಾಗಿದ್ದಾರೆ. ಈ ಪೈಕಿ 42 ಜನರ ಸೋಂಕು ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರಂನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.


