ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ನಾಗರಪಂಚಮೀ ಪರ್ವವನ್ನು ಸರ್ಕಾರಿ ಮಾನದಂಡಗಳಿಗೆ ಅನುಸಾರ ಮೂಲ ನಾಗವನ ಸನ್ನಿಧಿಯಲ್ಲಿ ವಿಶೇಷ ತನು ಸೇವಾ ಆರಾಧನೆ ಮೂಲಕ ಶ್ರದ್ಧಾ ಭಕ್ತಿ ಪೂರ್ವಕವಾಗಿ ಆಚರಿಸಿ ಊರ ರಕ್ಷಣೆಯನ್ನು ಕೋರಿ ಪ್ರಾರ್ಥಿಸಲಾಯಿತು. ಶ್ರೀಕ್ಷೇತ್ರದಲ್ಲಿ ನಾಗರಮಪಂಚಮಿ ಪರ್ವವನ್ನು ಶ್ರಾವಣ ಶನಿವಾರದೊಂದಿಗೆ ಉಷಃಕಾಲ ಪೂಜೆಯ ನಂತರ ಶ್ರೀ ಕ್ಷೇತ್ರದ ಮೊಕ್ತೇಸರ ಎಸ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಹಾಗೂ ಶಿವರಾಜ ವಿಪ್ರರೊಡಗೂಡಿ ಹಲವು ಧಾರ್ಮಿಕ ಸೇವೆಗಳು ನಡೆಯಿತು.
ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ಸೇವೆ, ಶೇಷಶಯನ ನಾಗ ವಿಷ್ಣುಮೂರ್ತಿ ಶ್ರೀರಾಮವಿಠಲನ ಸನ್ನಿಧಿಯಲ್ಲಿ ವಿಶೇಷ ಸೇವೆ, ಶ್ರೀಸದಾಶಿವ ದೇವರ ಸನ್ನಿಧಿಯಲ್ಲಿ ನಾಗಭೂಷಣ ಪ್ರೀತ್ಯರ್ಥವಾಗಿ ಪಂಚದ್ರವ್ಯಗಳಿಂದ ಪಂಚಾಮೃತಾಭಿಷೇಕ ರುದ್ರಾಭಿಷೇಕಗಳನ್ನು ಮಾಡಿ ರಜತನಾಗ ಸ್ವರ್ಣನಾಗಗಳೊಂದಿಗೆ ಅಲಂಕಾರ ಮಾಡಿ ಪುಷ್ಪಾಲಂಕಾರ ಅರ್ಚನೆಯನ್ನು ಸಲ್ಲಿಸಿ ಧೂಪದೀಪ ನೈವೇದ್ಯಗಳೊಂದಿಗೆ ವಿಶೇಷ ಸೇವಾ ಮಂಗಳಾರತಿಯನ್ನು ಸಲ್ಲಿಸಿ ಶುಭವನ್ನು ಪ್ರಾರ್ಥಿಸಿ ಕೊರೋನಾ ರೋಗದಿಂದ ಮುಕ್ತಿಗಾಗಿ ಪ್ರಾರ್ಥಿಸಲಾಯಿತು.
ನಾಗವನದಲ್ಲಿ ತನುವಿನ ಕ್ಷೀರಧಾರೆಯನ್ನು ಸೀಯಾಳದಿಂದ ನಾಳಿಕೇರಧಾರೆ, ಪಂಚಾಮೃತಾಭಿಷೇಕದ ಸಲುವಾಗಿ ಕ್ಷೀರ ದಧಿ ಘೃತ ಮಧು ಶರ್ಕರ ಫಲಾಭಿಷೇಕ, ಶ್ರೀಗಂಧ ಅರಸಿನ ಹುಡಿ ರಸ ಹಾಗು ನಾಳೀಕೇರ ಜಲಧಾರೆಯೊಂದಿಗೆ ನಾಗನನ್ನು ಪೂಜಿಸಲಾಯಿತು. ಪ್ರಸನ್ನ ಕಾಲದಲ್ಲಿ ಭಗವದ್ಭಕ್ತರೊಡಗೂಡಿ ಶ್ರೀನಾಗರಾಜನನ್ನು ಪ್ರಾರ್ಥಿಸಿ ಪ್ರಸಾದವನ್ನು ಸ್ವೀಕರಿಸಿ ನಾಡಿಗೆ ಶುಭವನ್ನು ಕೋರಲಾಯಿತು.


