ಕೊಚ್ಚಿ: ಒಂದೆಡೆ ಹೈರಾಣಗೊಳಿಸುತ್ತಿರುವ ಕೋವಿಡ್ ಹಾಗೂ ಇದೀಗ ಬಂದೊದಗಿರುವ ಕಡಲು ಕೊರೆತಗಳಿಂದ ಕಂಗಾಲಾದ ಕೊಚ್ಚಿಯ ಚೆಲ್ಲಾನಂ ನಿವಾಸಿಗಳ ಸಂಕಷ್ಟಮಯ ಬದುಕಿಗೆ ಆಸರೆಯೊದಗಿಸುವಂತೆ ಬಿನ್ನೈಸಿ ಚೆಲ್ಲಾನಾದ 10 ನೇ ತರಗತಿ ವಿದ್ಯಾರ್ಥಿ ಎಡ್ಗರ್ ಸೆಬಾಸ್ಟಿಯನ್ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾನೆ.
ಕೋವಿಡ್ ಸೋಂಕಿನಿಂದ ಚೆಲ್ಲಾನಂ ನಲ್ಲಿ ಕಳೆದ ಕೆಲವು ವಾರಗಳಲ್ಲಿ ನೂರಾರು ಜನರು ಸೋಂಕಿಗೆ ತುತ್ತಾಗಿದ್ದಾರೆ. ಏತನ್ಮಧ್ಯೆ, ಉಲ್ಬಣಗೊಂಡ ಸಮುದ್ರ ಕೊರೆತದಿದಾಗಿ ನೂರಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ತೀವ್ರ ಪ್ರವಾಹದ ನಂತರ ಮನೆಗಳನ್ನು ಕಳೆದುಕೊಂಡವರಲ್ಲಿ ಎಡ್ಗರ್ ಸೆಬಾಸ್ಟಿಯನ್ ಕುಟುಂಬವೂ ಒಂದು. 14 ವರ್ಷದ ಈ ಬಾಲಕ ತಾನೀ ಪತ್ರ ಬರೆಯುತ್ತಿರುವುದು ಅನ್ಯ ಮಾರ್ಗಗಳಿಲ್ಲದೆ ಕೊನೆಯ ಪ್ರಯತ್ನ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಎಡ್ಗರ್ ಜುಲೈ 25 ರಂದು ಪತ್ರ ಬರೆದಿದ್ದಾರೆ.
'ದುರಂತ ನನ್ನ ಗ್ರಾಮವಾದ ಚೆಲ್ಲಾನಂ ಅನ್ನು ಕಾಡುತ್ತಿದೆ. ಆದರೆ ನಮಗೆ ಸಹಾಯ ಮಾಡಲು ಯಾರೂ ಇಲ್ಲ. ಈ ಭಯದಿಂದ ಪತ್ರವನ್ನು ಬರೆಯಲಾಗಿದೆ. ನನ್ನ ಕುಟುಂಬ ವರ್ಷಕ್ಕೆ ಎರಡು ಬಾರಿಯಾದರೂ ಮನೆ ಬಿಟ್ಟು ಹೋಗುವುದು ನನಗೆ ನೆನಪಿದೆ. ಬೇಸಿಗೆ ಮತ್ತು ಮಾನ್ಸೂನ್ ಸಮಯದಲ್ಲಿ ಸಮುದ್ರವು ಪ್ರಕ್ಷುಬ್ದವಾಗಿರುತ್ತದೆ ಮತ್ತು ಮನೆ ಪ್ರವಾಹಕ್ಕೆ ಒಳಗಾಗುತ್ತದೆ. ಈ ವರ್ಷ ಜುಲೈ 16 ರಿಂದ ಸಮುದ್ರ ತೀವ್ರ ಸ್ವರೂಪ ಪಡೆದಿದೆ. ಯಾವಾಗಲೂ ಹಾಗೆ, ಈ ಸಮಯದಲ್ಲಿ ಸಂಬಂಧಿಕರ ಮನೆಗಳಿಗೆ ತೆರಳುತ್ತೇವೆ. ಆದರೆ ಈ ಬಾರಿ ಕೋವಿಡ್ ಕಾರಣ ಎಲ್ಲಿಗೂ ತೆರಳಲಾಗದೆ, ಇಲ್ಲೂ ಇರಲಾರದೆ ಏನು ಮಾಡಬೇಕೆನ್ನುವುದೂ ತಿಳಿಯದೆ ದಿಕ್ಕೆಟ್ಟಿದ್ದೇವೆ ಎಂದು ಎಡ್ಗರ್ ಪತ್ರದಲ್ಲಿ ಬರೆದಿದ್ದಾರೆ.
ಕರಾವಳಿ ತೀರ ಪ್ರದೇಶದ ಕುಟುಂಬಗಳನ್ನು ರಕ್ಷಿಸಲು ಸಮುದ್ರ ಗೋಡೆ ನಿರ್ಮಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದೇನೆ ಎಂದು ಎಡ್ಗರ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. 'ಆದರೆ ನಮಗೆ ಸಹಾಯ ಮಾಡಲು ಯಾರೂ ಬಂದಿಲ್ಲ. ಚೆಲ್ಲಾನಾದ ಹೆಚ್ಚಿನ ಮನೆಗಳನ್ನು ಬೃಹತ್ ಅಲೆಗಳು ಹೊಡೆದುರುಳಿಸಿವೆ. ಸುಮಾರು 400 ಮನೆಗಳು ಭಾಗಶಃ ನಾಶವಾದವು ಮತ್ತು ಆರು ಮನೆಗಳು ಸಂಪೂರ್ಣವಾಗಿ ನಾಶವಾದವು. ಮನೆಯಲ್ಲಿ ಇರಿಸಲಾದ ಪಠ್ಯಪುಸ್ತಕಗಳು ಕಳೆದುಹೋಗಿವೆ. ಮಾನ್ಸೂನ್ ಕೇರಳದಲ್ಲಿ ಈ ಬಾರಿಯೂ ಬಿರುಸಿನಿಂದ ಇರುವುದು ಗಮನಿಸಿದರೆ ಪ್ರವಾಹದ ಭೀತಿ ಇದೆ" ಎಂದು ಎಡ್ಗರ್ ಹೇಳಿರುವರು.
'ಅರೇಬಿಯನ್ ಸಮುದ್ರವು ಭಾರತದ ಗಡಿಗಳಲ್ಲಿ ಒಂದಾಗಿದೆ ಎಂದು ನಾವು ಕಲಿತಿದ್ದೇವೆ. ಈ ಗಡಿಗಳನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ನಾನು ನಂಬುತ್ತೇನೆ. ನೀವು ನನ್ನ ಕೊನೆಯ ಭರವಸೆ. ಸಮುದ್ರದ ಗೋಡೆ ನಿರ್ಮಿಸಿ ನಮ್ಮನ್ನು ಉಳಿಸುವಂತೆ ನಾವು ವಿನಮ್ರವಾಗಿ ಕೇಳಿಕೊಳ್ಳುತ್ತೇವೆ 'ಎಂಬ ಒಕ್ಕಣೆ ಇದೆ. ಆದರೆ, ಎಡ್ಗರ್ ಬರೆದ ಪತ್ರಕ್ಕೆ ರಾಷ್ಟ್ರಪತಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಡ್ಗರ್ ರಾಷ್ಟ್ರಪತಿಗಳು ಪತ್ರವನ್ನು ಓದಿ ಮಧ್ಯಪ್ರವೇಶಿಸುತ್ತಾರೆ ಎಂದು ಬಲವಾಗಿ ನಂಬಿದ್ದಾನೆ.
Facing nature's fury, Kerala student writes to President Kovind for help
Read @ANI Story | aninews.in/news/national/



