ಕಾಸರಗೋಡು: ಇಪ್ಪತ್ತು ವರ್ಷಗಳ ಹಿಂದೆ ಕಳೆದುಹೋದ ಕಿವಿಯ ಆಭರಣವೊಂದು(ಜಿಮ್ಕಿ) ಇದೀಗ ವೃದ್ದೆಯೋರ್ವರಿಗೆ ಲಭ್ಯವಾಗಿದ್ದು ಇಳಿವಯಸ್ಸಿನ ಹೃದಯಕ್ಕೆ ತಂಪೆಲರ ಸಂತಸ ಮನೆಮಾಡಿದೆ.
ಬೇಡಗಂ ನ ನಾರಾಯಣಿ ವಲ್ಯಮ್ಮ(ದೊಡ್ಡಮ್ಮ) ಅವರ ಕಿವಿ ಆಭರಣ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಲಭ್ಯವಾಗಿದ್ದು ಅವರು ನಾರಾಯಣಿ ಅವರಿಗೆ ಹಿಂದಿರುಗಿಸಿದಾಗ ಆನಂದಕ್ಕೆ ಪಾರವೇ ಇರಲಿಲ್ಲ. ನಾರಾಯಣಿ ವಲ್ಯಮ್ಮ ಅವರ ಕಿವಿಯೋಲೆ ಕಾಣೆಯಾದಾಗ ಚಿನ್ನದ ಪವನ್ ಒಂದರ ಸಾಮಾನ್ಯ ಬೆಲೆ 4,400 ರೂ.ರಷ್ಟಿತ್ತು.
ಇಪ್ಪತ್ತು ವರ್ಷಗಳ ಹಿಂದೆ ಕಿವಿಯ ಆಭರಣ ಆಕಸ್ಮಿಕವಾಗಿ ಕಳೆದು ಹೋದಾಗ ನಾರಾಯಣಿ ವಲ್ಯಮ್ಮ ತೀವ್ರ ಸಂತಾಪಕ್ಕೊಳಗಾಗಿದ್ದರು. ಬಡ ವರ್ಗದ ಇವರಿಗೆ ತವರು ಮನೆಯಿಂದ ಮದುವೆಯಾದಾಗ ಕೊಡಿಸಿದ ಆಭರಣ ಅದಾಗಿತ್ತು. ಬಳಿಕ ಬಂದು ಹೋದವರಿಗೆಲ್ಲ ಅಜ್ಜಿ ತನ್ನ ದುಃಖವನ್ನು ವ್ಯಕ್ತಪಡಿಸಿದ್ದರು. ಆದರೆ ಸುಧೀರ್ಘ ವರ್ಷ ಯಾರಿಗೂ ಅದು ಲಭ್ಯವಾಗಿರಲಿಲ್ಲ. ಹುಡುಕದ ಸ್ಥಳಗಳೇ ಇರಲಿಲ್ಲ. ರಾತ್ರಿ,ಹಗಲು ಕಳೆದ ಆಭರಣದಿಂದ ಅವರು ದುಃಖಿತರಾಗಿದ್ದರು.
ಘಟನೆ ನಡೆದು 20 ವರ್ಷಗಳಾಗಿವೆ. ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಬೇಡಗಂ ಎಡಂಪುರಡಿ ಎಂಬಲ್ಲಿ ಕಳೆ ತೆಗೆಯುವ ವೇಳೆ ಕಾರ್ಮಿಕರಿಗೆ ಈ ಆಭರಣ ಗೋಚರಿಸಿದೆ. ನಾರಾಯಣಿ ವಲ್ಯಮ್ಮ ಅವರ ಪರಿಚಿತರಾದ ಕಾರ್ಮಿಕರಿಗೆ ಇದು ಅವರದ್ದಿರಬೇಕೆಂಬ ಸಂದೇಹದಲ್ಲಿ ತೋರಿಸಿದಾಗ ನಾರಾಯಣಿ ಅವರ ಕಣ್ಣಾಲಿಗಳು ತುಂಬಿಬಂದವು. ಮನೆಯಿಂದ ಗಾವುದ ದೂರದ ತಮ್ಮದೇ ಪುಟ್ಟ ತೋಟದಲ್ಲಿ ಮಣ್ಣಡಿ ಸೇರಿಕೊಂಡಿದ್ದ ಆಭರಣ ಮತ್ತೆ ಲಭಿಸಿದ್ದು ಸುಕೃತದ ಫಲವೆಂದು ನಾರಾಯಣಿ ವಲ್ಯಮ್ಮ ಗದ್ಗರಿತರಾದರು. ಚಿಒಜu 4,400 ರೂ. ಬೆಲೆಯಿದ್ದ ಕಾಲದಲ್ಲಿ ಕಳೆದುಕೊಂಡ ಚಿನ್ನಕ್ಕೆ ಇಂದೀಗ ಪವನ್ ಒಂದಕ್ಕೆ 40 ಸಾವಿರ ರೂ. ಬೆಲೆ ಏರಿಕೆಯಾಗಿದ್ದು ಕರೊನಾ ಸಂಕಷ್ಟದ ಮಧ್ಯೆ ಮತ್ತೆ ಕಳಕೊಂಡದ್ದು ನಾಲ್ಕೈದು ಪಟ್ಟು ಮೌಲ್ಯವರ್ಧನೆಯೊಂದಿಗೆ ಲಭ್ಯವಾಗಿರುವುದು ಆಶ್ಚರ್ಯಮೂಡಿಸಿದೆ.



