ತಿರುವನಂತಪುರ: ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಕೇಂದ್ರ ಪ್ರಕಟಿಸಿರುವ ನಿರ್ಧಾರಕ್ಕೆ ಸಹಕರಿಸಲು ಸಾಧ್ಯವಿಲ್ಲ. ನಾಗರಿಕ ವಿಮಾನಯಾನ ಸಚಿವಾಲಯವು ರಾಜ್ಯಕ್ಕೆ ನೀಡಿದ ಭರವಸೆಯನ್ನು ಉಲ್ಲಂಘಿಸಿದೆ. ಈ ವಿಷಯವು ಹೈಕೋರ್ಟ್ನ ಪರಿಗಣನೆಯಲ್ಲಿದೆ ಎನ್ನುವುದನ್ನು ನಿರ್ಲಕ್ಷ್ಯಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರ ಸೂಚಿಸುವ ಮುಖ್ಯ ಪಾಲುದಾರ ಕಂಪನಿಗೆ ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಪದೇ ಪದೇ ಕೇಳಿಕೊಂಡಿತ್ತು. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ 2003 ರಲ್ಲಿ ಭರವಸೆ ನೀಡಿತ್ತು. ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಮಧ್ಯಸ್ಥಿಕೆಗಳು ಮತ್ತು ಕ್ರಮಗಳನ್ನು ಪರಿಗಣಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಭರವಸೆಯನ್ನೂ ನೀಡಿತ್ತು. ಇದು ನೀವು ನನಗೆ ನೇರವಾಗಿ ಭರವಸೆ ನೀಡಿದ ವಿಷಯ ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಎಲ್ಲಾ ಶಿಫಾರಸುಗಳನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಸಂದರ್ಭದಲ್ಲಿ ಯೋಜನೆಯೊಂದಿಗೆ ಸಹಕರಿಸುವುದು ಕಷ್ಟ. ನೀಡಿದ ಭರವಸೆಗಳನ್ನು ಈಗ ಉಲ್ಲಂಘಿಸಲಾಗುತ್ತಿದೆ. ಇದು ಜನರ ಬೇಡಿಕೆ-ಆಶೋತ್ತರಗಳಿಗೆ ವಿರುದ್ಧವಾದ ನಿರ್ಧಾರವಾಗಿದೆ. ಈ ಪತ್ರದಲ್ಲಿ, ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿಮ್ಮನ್ನು ವಿನಂತಿಸುತ್ತಿರುವೆ ಎಂದು ಮುಖ್ಯಮಂತ್ರಿ ಉಲ್ಲೇಖಿಸಿರುವರು.
ತಿರುವನಂತಪುರ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಅದಾನಿ ಸಮೂಹಕ್ಕೆ 50 ವರ್ಷಗಳಿಂದ ಹಸ್ತಾಂತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ವಿಮಾನ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ನಿರ್ವಹಿಸಲು ಕೇಂದ್ರ ನಿರ್ಧರಿಸಿರುವ ಬೆನ್ನಿಗೆ ಇಂತಹ ಆದೇಶ ಹೊರಬಿದ್ದಿದೆ. ತಿರುವನಂತಪುರ ಹೊರತುಪಡಿಸಿ ಜೈಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು ಸಹ 50 ವರ್ಷಗಳ ಕಾಲ ಗುತ್ತಿಗೆಗೆ ನೀಡಲಾಗುತ್ತಿದೆ.
ಅದಾನಿ ಗ್ರೂಪ್ಗೆ ಈ ಹಿಂದೆ ದೇಶದ ಕೆಲವು ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಕೇಂದ್ರ ಮುಂದಾಗಿತ್ತು. ಅದಾನಿ ಗ್ರೂಪ್ಗೆ ಅಹಮದಾಬಾದ್, ಲಕ್ನೋ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಕಾರ್ಯವನ್ನು ವಹಿಸಲಾಗಿತ್ತು. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣ ಪ್ರಾಧಿಕಾರವು ದೇಶದಲ್ಲಿ 100 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿದೆ.


