HEALTH TIPS

ರಾಜ್ಯಸಭೆಯಿಂದ ರಾಷ್ಟ್ರಪತಿ ಗಾದಿಯವರೆಗೆ ಪ್ರಣಬ್‌ ಮುಖರ್ಜಿ ನಡೆದುಬಂದ ದಾರಿ!

       ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪ್ರಣಬ್ ಮುಖರ್ಜಿ ಭಾರತದ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರು. ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಜಬಾಬ್ದಾರಿಯುತ ಹಾಗೂ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಹಿರಿಯ ನಾಯಕರು. ರಾಷ್ಟ್ರಪತಿ ಆಗುವವರೆಗೂ ಭಾರತ ಸರ್ಕಾರದಲ್ಲಿ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮುಖರ್ಜಿ ಅವರು 2009ರಿಂದ 2012ರವರೆಗೆ ಕೇಂದ್ರ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ರಾಷ್ಟ್ರಪತಿಯಾಗಿ ಐದು ವರ್ಷ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತರಾಗುತ್ತಾರೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಗೌರವಕ್ಕೂ 2019ರಲ್ಲಿ ಭಾಜನರಾದವರು.

      1969ರಲ್ಲಿ ಮುಖರ್ಜಿ ಅವರಿಗೆ ರಾಜಕೀಯವಾಗಿ ಬಹುದೊಡ್ಡ ತಿರುವು ಸಿಗುತ್ತದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಹಾಯದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಕಾಂಗ್ರೆಸ್​ನಿಂದ ಪ್ರಣಬ್ ಮುಖರ್ಜಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಅವರು  ರಾಜಕೀಯವಾಗಿ ಹಿಂದಿರುಗಿ ನೋಡಿದ್ದೆ ಇಲ್ಲ. ಇಂದಿರಾ ಗಾಂಧಿ ಅವರ ಪರಮಾಪ್ತರಲ್ಲಿ  ಒಬ್ಬರಾದ ಮುಖರ್ಜಿ 1973ರಲ್ಲಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವರೂ ಆಗುತ್ತಾರೆ.
   1975-77ರ ಅವಧಿಯ ಆಂತರಿಕ ತುರ್ತು ಪರಿಸ್ಥಿತಿ ವೇಳೆ ಹಲವು ಕಾಂಗ್ರೆಸ್​ ನಾಯಕರು ಆರೋಪಕ್ಕೆ ಗುರಿಯಾದಂತೆ ಇವರು ಸಹ ಆರೋಪಗಳಿಗೆ ತುತ್ತಾಗುತ್ತಾರೆ. ಆ ಬಳಿಕ ಮುಖರ್ಜಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿಭಾಯಿಸಿದರು. ಮೊದಲ ಬಾರಿಗೆ 1982-84ರ ಅವಧಿಯಲ್ಲಿ ಹಣಕಾಸು ಸಚಿವರಾದರು. ಅಷ್ಟೇ ಅಲ್ಲದೇ 1980ರಿಂದ 85ರವರೆಗೆ ರಾಜ್ಯಸಭೆಯ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

   ಪ್ರಣಬ್ ಮುಖರ್ಜಿ ರಾಜೀವ್ ಗಾಂಧಿ (ಇಂದಿರಾ ಗಾಂಧಿ ಮಗ) ಅವಧಿಯಲ್ಲಿ ರಾಜಕೀಯವಾಗಿ ಕಡೆಗಣನೆಗೆ ಒಳಗಾದರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಅವರ ಉತ್ತರಾಧಿಕಾರಿ ತಾನೇ ಎಂದು ಮುಖರ್ಜಿ ಭಾವಿಸಿಕೊಂಡಿದ್ದರು. ಏಕೆಂದರೆ ರಾಜೀವ್ ಗಾಂಧಿ ಅವರಿಗೆ ರಾಜಕೀಯವಾಗಿ ಅನುಭವವಿಲ್ಲ. ಹೀಗಾಗಿ ತಾವೇ ಮುಂದಿನ ಪ್ರಧಾನಿಯಾಗಲು ಬಯಸಿದ್ದರು. ಆದರೆ, ಆ ಬಯಕೆ ಈಡೇರಿಸಿಕೊಳ್ಳುವಲ್ಲಿ ಮುಖರ್ಜಿ ಸೋತು ಹೋದರು.

  ಆ ಬಳಿಕ ತಾವೇ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಎಂಬ ಸ್ವಂತ ಪಕ್ಷವೊಂದನ್ನು ಸ್ಥಾಪಿಸಿದರು. ಬಳಿಕ ರಾಜೀವ್ ಗಾಂಧಿ ಅವರೊಂದಿಗೆ ವೈಮನಸ್ಸು ತಿಳಿಗೊಂಡು ಅವರ ಸಖ್ಯ ಗಳಿಸಿಕೊಂಡ ಬಳಿಕ 1989ರಲ್ಲಿ ಪಕ್ಷವನ್ನು ಕಾಂಗ್ರೆಸ್​ನೊಂದಿಗೆ ವಿಲಿನಗೊಳಿಸಿದರು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಬಳಿಕ ಮುಖರ್ಜಿ ಅವರ ರಾಜಕೀಯ ಜೀವನ ಮತ್ತೆ ಮುನ್ನೆಲೆಗೆ ಬರಲು ಆರಂಭಿಸಿತು.

    ಆಗ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರು 1991ರಲ್ಲಿ ಮುಖರ್ಜಿ ಅವರನ್ನು ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದರು. ಮತ್ತು 1995ರಲ್ಲಿ ವಿದೇಶಾಂಗ ಸಚಿವರಾದರು. ಇದರೊಂದಿಗೆ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರಾಗಿ ಗುರುತಿಸಿಕೊಂಡ ಮುಖರ್ಜಿ, ಮುಂದೆ ಸೋನಿಯಾ ಗಾಂಧಿ ಅವರ ರಾಜಕೀಯ ಮಾರ್ಗದರ್ಶಕರಾಗಿ 1998ರಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗಲು ಪ್ರಮುಖ ಪಾತ್ರ ವಹಿಸಿದ್ದರು.

       ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್​ (ಯುಪಿಎ) ಸರ್ಕಾರ 2004ರಲ್ಲಿ ಮರಳಿ ಅಧಿಕಾರಕ್ಕೆ ಬಂತು. ಆಗ ಮುಖರ್ಜಿ ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ನಿಂತು ಗೆದ್ದು ಬರುತ್ತಾರೆ. ಅಂದಿನಿಂದ ಅವರು ರಾಜೀನಾಮೆ ನೀಡುವವರೆಗೂ (2012) ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎರಡನೇ ವ್ಯಕ್ತಿಯಾಗಿಯೇ ಗುರುತಿಸಿಕೊಳ್ಳುತ್ತಾರೆ.2004-06ರವರೆಗೆ ರಕ್ಷಣಾ ಖಾತೆ, 2006-09 ರವರೆಗೆ ವಿದೇಶಾಂಗ ಖಾತೆ ಹಾಗೂ 2009ರಿಂದ 2012ರವರೆಗೆ ಹಣಕಾಸು ಖಾತೆಗಳನ್ನು ನಿಭಾಯಿಸುತ್ತಾರೆ. ಅಷ್ಟೇ ಅಲ್ಲದೇ ಸರ್ಕಾರದ ಹಲವು ಸಮಿತಿಗಳ ಮುಖ್ಯಸ್ಥರಾಗಿಯೂ ಮತ್ತು ಲೋಕಸಭಾ ನಾಯಕರಾಗಿಯೂ ಸೇವೆ ಸಲ್ಲಿಸುತ್ತಾರೆ.

     2012ರ ಜುಲೈನಲ್ಲಿ ಯುಪಿಎ ಮೈತ್ರಿಯಿಂದ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಪೂರ್ಣ ಬಹುಮತ ಹೊಂದಿದ್ದ ಯುಪಿಎಯಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮುಖರ್ಜಿ ಅವರು ತಮ್ಮ ಪ್ರತಿಸ್ಪರ್ಧಿ ಪಿ.ಎ.ಸಂಗ್ಮಾ ಅವರನ್ನು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಭಾರತದ ಮೊದಲ ಪ್ರಜೆಯಾದರು.

     2017ರಲ್ಲಿ ಮುಖರ್ಜಿ ಅವರ ರಾಷ್ಟ್ರಪತಿ ಅವಧಿ ಮುಕ್ತಾಯವಾದ ಬಳಿಕ ಅವರು ಮತ್ತೆ ರಾಷ್ಟ್ರಪತಿ ಮರುಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಇಚ್ಛಿಸಲಿಲ್ಲ. ಆ ವೇಳೆಗೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ರಾಜಕೀಯವಾಗಿ ನಿವೃತ್ತಿ ಪಡೆದರು. 2017ರ ಜುಲೈ 25ರಂದು ಅವರ ರಾಷ್ಟ್ರಪತಿ ಅವಧಿ ಮುಕ್ತಾಯಗೊಂಡಿತು. ಬಳಿಕ 2018ರ ಜೂನ್​ನಲ್ಲಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾದರು. 2018ರ ಜೂನ್​ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಸಮಾರಂಭದಲ್ಲಿ ಪಾಲ್ಗೊಂಡ ಮೊದಲ ಮಾಜಿ ರಾಷ್ಟ್ರಪತಿ ಕೂಡ ಪ್ರಣಬ್ ಮುಖರ್ಜಿ.

                 ಪ್ರಣಬ್ ಮುಖರ್ಜಿ ಬಾಲ್ಯಜೀವನ:
    ಬ್ರಿಟಿಷ್ ಭಾರತದ ಅವಧಿಯಲ್ಲಿ ಬಂಗಾಳ ಪ್ರಾಂತ್ಯದಲ್ಲಿ (ಈಗ ಅದು ಪಶ್ಚಿಮ ಬಂಗಾಳದ ಬಿರಭೂಮ್​ ಜಿಲ್ಲೆ) ಬೆಂಗಾಳಿ ಕುಟುಂಬದಲ್ಲಿ 1935 ಡಿಸೆಂಬರ್ 11ರಂದು ಪ್ರಣಬ್ ಜನಿಸುತ್ತಾರೆ. ಇವರ ತಂದೆ ಕಾಮದ್ ಕಿನ್ಕರ್ ಮುಖರ್ಜಿ ಅವರು ಸ್ವತಂತ್ರ ಚಳವಳಿಯಲ್ಲಿ ಸಕ್ರಿಯರಾಗಿರುತ್ತಾರೆ. ಮತ್ತು 1952 ಮತ್ತು 1964ರಲ್ಲಿ ಪಶ್ಚಿಮಬಂಗಾಳ ವಿಧಾನ ಪರಿಷತ್​ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. ಮತ್ತು ಎಐಸಿಸಿ ಸದಸ್ಯರಾಗಿರುತ್ತಾರೆ. ಪ್ರಣವ್ ಅವರ ತಾಯಿ ರಾಜಲಕ್ಷ್ಮೀ ಮುಖರ್ಜಿ.

    ಪ್ರಣಬ್ ಮುಖರ್ಜಿ ಸುರಿಯಲ್ಲಿನ ವಿದ್ಯಾಸಾಗರ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಾರೆ. ಆ ಬಳಿಕ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾರೆ. ಶಿಕ್ಷಣದ ಬಳಿಕ ಕಲ್ಕತ್ತಾದ ವಿದ್ಯಾಸಾಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವಿಷಯದ ಉಪನ್ಯಾಸಕರಾಗಿ (ಸಹಾಯಕ ಪ್ರಾಧ್ಯಾಪಕ) ಸೇವೆ ಸಲ್ಲಿಸುತ್ತಾರೆ.

      ಅಷ್ಟೇ ಅಲ್ಲದೇ ದೇಶಿರ್ ದಕ್​ ಎಂಬ ಪತ್ರಿಕೆಯಲ್ಲಿ ಪತ್ರಕರ್ತರಾಗಿಯೂ ಕೆಲ ಕಾಲ ಕೆಲಸ ನಿರ್ವಹಿಸುತ್ತಾರೆ. ಆನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ. 1957ರಲ್ಲಿ ಸುರ್ವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪ್ರಣಬ್ ಮುಖರ್ಜಿ ಅವರಿಗೆ ಶರ್ಮಿಷ್ಟಾ ಮುಖರ್ಜಿ, ಅಭಿಜಿತ್ ಮುಖರ್ಜಿ ಹಾಗೂ ಇಂದ್ರಜಿತ್ ಮುಖರ್ಜಿ ಎಂಬ ಮೂವರು ಮಕ್ಕಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries