ಕುಂಬಳೆ: ಕುಂಬಳೆ ಹಿರಿಯ ಬುನಾದಿ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಿತು. ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಲಾನ್ಯಾಸ ನಡೆಸಿದರು.
ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಯಜ್ಞ ಯೋಜನೆ ಅಂಗವಾಗಿ ನೂರು ದಿನಗಳ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಈ ಕಟ್ಟಡ ನಿರ್ಮಾಣ ನಡೆಸಲಾಗುತ್ತಿದೆ. ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದ 90 ಶಾಲೆಗಳ ನೂತನ ಕಟ್ಟಡಗಳ ಉದ್ಘಾಟನೆ ಮತ್ತು 54 ಶಾಲೆಗಳ ಕಟ್ಟಡ ನಿರ್ಮಾಣ ಶಿಲಾನ್ಯಾಸಕ್ಕೆ ಚಾಲನೆಯನ್ನು ಮುಖ್ಯಮಂತ್ರಿ ಈ ವೇಳೆ ನೆರವೇರಿಸಿದರು.
ಕುಂಬಳೆ ಬುನಾದಿ ಶಾಲೆಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಶಿಲಾಫಲಕ ಅನಾವರಣಗೊಳಿಸಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ, ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್, ಎ.ಇ.ಒ.ಕೆ.ಯತೀಶ್ ಕುಮಾರ್ ರೈ, ಮುಖ್ಯ ಶಿಕ್ಷಕಿ ಎಂ.ಸರೋಜಿನಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಆನೆಬಾಗಿಲು, ಮಾತೃ ಸಂಘದ ಅಧ್ಯಕ್ಷೆ ಮರಿಯಾ ಬೆಂಜಮಿನ್, ಕಾರ್ಯಕ್ರಮ ಸಮಿತಿ ಸಂಚಾಲಕ ಕೆ.ಜಿ.ಜಾನಿ, ರಾಜಕೀಯ ಪಕ್ಷ ಪ್ರತಿನಿಧಿ ಮಂಜುನಾಥ ಆಳ್ವ ಮೊದಲಾದವರು ಉಪಸ್ಥಿತರಿದ್ದರು.