ನಾಸಿಕ್: ಬಿಜೆಪಿ ಮಾಜಿ ಎಂಎಲ್ಸಿ ನಿಶಿಗಂಧಾ ಮೊಗಲ್ ಅವರು ತಮ್ಮ 75ನೇ ಹುಟ್ಟುಹಬ್ಬದ ಪ್ರಯುಕ್ತ ಅದ್ಭುತ ಕೆಲಸವೊಂದನ್ನು ಮಾಡಿದ್ದಾರೆ. ತಮ್ಮ ದೇಶ ಭಕ್ತಿ 'ಬಂಗಾರ' ಎಂದು ತೋರಿದ್ದಾರೆ.
ನಿಶಿಗಂಧಾ ಅವರು ತಮ್ಮ 20 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಭಾರತೀಯ ಸೈನ್ಯಕ್ಕೆ ದೇಣಿಗೆ ನೀಡಿದ್ದಾರೆ. ಇದನ್ನು ಯುದ್ಧ, ಮತ್ತಿತರ ಹೋರಾಟಗಳಲ್ಲಿ ಹುತಾತ್ಮರಾದ ಯೋಧರ ಪತ್ನಿಯರ ಹಾಗೂ ನಿವೃತ್ತರಾದ ಸೇನಾ ಸಿಬ್ಬಂದಿಯ ಅನುಕೂಲಕ್ಕಾಗಿ ಬಳಸಿ ಎಂದು ನಿಶಿಗಂಧಾ ಹೇಳಿದ್ದಾರೆ.
ನಮ್ಮ ದೇಶದ ಸೈನಿಕರು, ಸೈನ್ಯಕ್ಕಾಗಿ ಏನಾದರೂ ಒಳಿತು ಮಾಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದೆ. ಸೈನ್ಯಕ್ಕಾಗಿ ಏನಾದರೂ ನೀಡಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಸೇನೆಯ ಕಲ್ಯಾಣಕ್ಕಾಗಿ ನನ್ನ ಬಳಿ ಇದ್ದ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರೂ ನನ್ನ ಈ ಕಾರ್ಯವನ್ನು ಶ್ಲಾಘಿಸಿ, ಪತ್ರ ಬರೆದಿದ್ದಾರೆ ಎಂದು ನಿಶಿಗಂಧಾ ತಿಳಿಸಿದ್ದಾರೆ. ನಿಶಿಗಂಧಾ ಮೊಗಲ್ ಅವರು 1996ರಿಂದ 2000ದವರೆಗೆ ಕೌನ್ಸಿಲರ್ ಕಾರ್ಯನಿರ್ವಹಿಸಿದ್ದರು.
ಇದೀಗ ತಮ್ಮ 75ನೇ ಹುಟ್ಟುಹಬ್ಬದಂದು ಬರೋಬ್ಬರಿ 20 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಸೈನ್ಯಕ್ಕೆ ನೀಡಿ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಿಶಿಗಂಧಾ ಅವರ ಕೆಲಸವನ್ನು ಶ್ಲಾಘಿಸಿ ಪತ್ರ ಬರೆದಿದ್ದು, ಈ ದೇಶದ ನಿರ್ಮಾಣಕ್ಕಾಗಿ ಹಿಂದಿನಿಂದಲೂ ಅನೇಕ ತಾಯಿ, ಸಹೋದರಿಯರು ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದು ನಮ್ಮಲ್ಲಿಯ ಸಂಪ್ರದಾಯವೂ ಹೌದು. ಇಂದು ನೀವು ನಿಮ್ಮ ಚಿನ್ನಾಭರಣಗಳನ್ನು ಸೈನ್ಯಕ್ಕೆ ದೇಣಿಗೆ ನೀಡುವ ಮೂಲಕ ಆ ಸಂಪ್ರದಾಯವನ್ನು ಉಳಿಸಿದಿರಿ..ಬಲಪಡಿಸಿದಿರಿ ಎಂದು ಹೊಗಳಿದ್ದಾರೆ.