HEALTH TIPS

'ತೀವ್ರತರ ಅಪೌಷ್ಟಿಕತೆ'ವುಳ್ಳ ಮಕ್ಕಳ ಗುರುತಿಸಲು ಕೇಂದ್ರ ಸರ್ಕಾರ ಸೂಚನೆ

      ನವದೆಹಲಿ: ತೀವ್ರತರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

      ಮಕ್ಕಳು ಹಾಗೂ ಮಹಿಳೆಯರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ತೀವ್ರತರ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಬೇಕು. ಅಗತ್ಯ ಬಿದ್ದರೆ ಆಸ್ಪತ್ರೆಗಳಿಗೆ ದಾಖಲಿಸಲು ಶಿಫಾರಸು ಮಾಡಬೇಕು. ಈ ಕಾರ್ಯವನ್ನು ಜ. 31ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಚಿವಾಲಯ ಸೂಚಿಸಿದೆ.

      'ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ'ವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪೌಷ್ಟಿಕತೆಗೆ ಸಂಬಂಧಿಸಿದ ಮಾನದಂಡದ ಪ್ರಕಾರ, ಎಲ್ಲ ಫಲಾನುಭವಿಗಳಿಗೆ ಈ ಕಾರ್ಯಕ್ರಮದ ಲಾಭ ದೊರೆಯುವಂತೆ ನೋಡಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.

     ತೀವ್ರತರ ಅಪೌಷ್ಟಿಕತೆ ಇರುವ ಮಕ್ಕಳ ಸಮೀಕ್ಷೆಗಾಗಿ 'ಪೋಷಣ್‌ ಟ್ರ್ಯಾಕರ್‌' ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸಚಿವಾಲಯ ಸೂಚಿಸಿದೆ.

      ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ಪೂರೈಕೆ ಆಗುತ್ತಿರುವುದು, ಅನುಷ್ಠಾನ ಜವಾಬ್ದಾರಿ ಹೊತ್ತವರ ಹಾಜರಾತಿ ಸೇರಿದಂತೆ ಮಹತ್ವದ ಮಾಹಿತಿಯನ್ನು ಈ ವ್ಯವಸ್ಥೆ ಸಂಗ್ರಹಿಸಿ, ಸಚಿವಾಲಯಕ್ಕೆ ರವಾನಿಸುವುದು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

      'ಪೌಷ್ಟಿಕತೆ ಹೆಚ್ಚಿಸಲು ಆಯುಷ್‌ ಪರಿಕಲ್ಪನೆಯಂತೆ ಆಹಾರ ಸೇವನೆ, ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವ ಬಗ್ಗೆ ಫಲಾನುಭವಿಗಳಲ್ಲಿ ಅರಿವು ಮೂಡಿಸಲು' ಸಚಿವಾಲಯ ಸೂಚಿಸಿದೆ.

     'ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಮುದಾಯ ಆಧಾರಿತ ಕಾರ್ಯಕ್ರಮಗಳೇ ಪರಿಣಾಮಕಾರಿ. ಇದರಿಂದ ಹೆಚ್ಚು ಮಕ್ಕಳಿಗೆ ಪೌಷ್ಟಿಕ ಆಹಾರ, ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯ' ಎಂದು ನವದೆಹಲಿ ಮೂಲದ ಆಹಾರ ಮತ್ತು ಪೌಷ್ಟಿಕ ಸುರಕ್ಷತೆ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಸುಜೀತ್‌ ರಂಜನ್‌ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries