ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಕೃಷಿಕರ ಬಗ್ಗೆ ಕಾಳಜಿ ವಹಿಸುವಲ್ಲಿ ಆಡಳಿತ ವರ್ಗವು ಮುಂದೆ ಬರಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರವೀಂದ್ರ ರೈ ಗೋಸಾಡ ಆಗ್ರಹಿಸಿದ್ದಾರೆ.
ಕುಂಬ್ಡಾಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಹೆಚ್ಚಿನ ಎಲ್ಲಾ ಕೃಷಿಕರೂ ಕಂಗು, ತೆಂಗು ಬೆಳೆಗಳನ್ನು ಪ್ರಧಾನ ಕೃಷಿಯನ್ನಾಗಿ ಜೀವಿಸುತ್ತಿದ್ದಾರೆ. ಈ ಕೃಷಿಕರಿಗೆ ಕಳೆದ 4 ತಿಂಗಳ ಹಿಂದೆ ನೀಡಿರುವ ಜೈವಿಕ ಗೊಬ್ಬರ, ಕುಮ್ಮಾಯ, ಕೋಪರ್ ಸಲ್ಪೇಟ್ ಮೊದಲಾದವುಗಳ ಸಬ್ಸಿಡಿ ಮೊತ್ತವನ್ನು ಈವರೆಗೆ ವಿತರಿಸದೆ ಕೃಷಿಕರನ್ನು ವಂಚಿಸುತ್ತಿರುವ ಸಂಬಂಧಪಟ್ಟವರ ನೀತಿಯೂ ಖಂಡನಾರ್ಹವಾಗಿದೆಯೆಂದೂ ಅವರು ಆರೋಪಿಸಿದರು. ಇತರ ಎಲ್ಲಾ ಪಂಚಾಯತು ಗಳಲ್ಲಿ ಈ ಸಬ್ಸಿಡಿ ಮೊತ್ತವನ್ನು ಕಾಲಾಕಾಲಕ್ಕೆ ವ್ಯವಸ್ಥಿತವಾಗಿ ನೀಡುತ್ತಿದ್ದು ಕುಂಬ್ಡಾಜೆಯಲ್ಲಿ ಮಾತ್ರ ಕೃಷಿಕರಲ್ಲಿ ತೋರುವ ಈ ರೀತಿಯ ಅನೀತಿಯನ್ನು ಬಿಜೆಪಿ ಎಂದೂ ಸಹಿಸದೆಂದೂ ಅವರು ತಿಳಿಸಿದರು. ಆದಷ್ಟು ಬೇಗ ಈ ಸಬ್ಸಿಡಿ ಮೊತ್ತವನ್ನು ವಿತರಿಸುವಲ್ಲಿ ಸಂಬಂಧಪಟ್ಟವರು ಮುಂದೆ ಬರಬೇಕು. ಇಲ್ಲದಿದ್ದಲ್ಲಿ ಪಂಚಾಯತಿನ ಎಲ್ಲಾ ಕೃಷಿಕರನ್ನು ಒಗ್ಗೂಡಿಸಿ ಉಗ್ರ ಹೋರಾಟವನ್ನು ನಡೆಸುವುದಾಗಿ ರವೀಂದ್ರ ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ಸಂಬಂಧಪಟ್ಟವರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.