ಹೊಸದಿಲ್ಲಿ : ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯಲ್ಲಿ ಭಾಗವಹಿಸಿದ್ದ ಯಾವ ರಾಜ್ಯಗಳು ಕೂಡಾ ಹೊಸ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಸಭೆಯಲ್ಲಿ ನಡೆದ ಚರ್ಚೆಗಳು ಕೃಷಿ ವಲಯದ ಸಮಸ್ಯೆಗಳ ಬಗ್ಗೆ ಕೇಂದ್ರಿತವಾಗಿದ್ದವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಇಂದಿನ ಸಭೆಯಲ್ಲಿ ಯಾರು ಕೂಡಾ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಿಲ್ಲ ಎನ್ನುವುದನ್ನು ಖಾತರಿಪಡಿಸುತ್ತೇನೆ" ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಲವು ರಾಜ್ಯಗಳು ಕೃಷಿ ಬಗ್ಗೆ ಚರ್ಚಿಸಿವೆ. ಆದರೆ ಯಾರೂ ಕೃಷಿ ಕಾನೂನು ರದ್ದತಿಗೆ ಒತ್ತಾಯಿಸಿಲ್ಲ ಎಂದರು.
ಬಿಹಾರ ಮತ್ತು ಸಿಕ್ಕಿಂನಂಥ ದೇಶಗಳು ಕೃಷಿ ಅವಲಂಬಿತ ರಾಜ್ಯಗಳಾಗಿದ್ದು, ಕೃಷಿ ಸುಧಾರಣೆಗೆ ಆಗ್ರಹಿಸಿವೆ ಎಂದು ಕುಮಾರ್ ಹೇಳಿದರು.
ಆಯಾ ಜಿಲ್ಲೆಗಳ ಹವಾಮಾನ ಪರಿಸ್ಥಿತಿಗೆ ಅನುಗುಣವಾದ ಬೆಳೆ ವ್ಯವಸ್ಥೆ, ನೀರಿನ ಸಂರಕ್ಷಣೆಗೆ ಉತ್ತೇಜನ, ಪೌಷ್ಟಿಕ ಆಹಾರಧಾನ್ಯ ಮತ್ತು ಬೇಳೆಕಾಳುಗಳನ್ನು ಬೆಳೆಯುವುದು, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ಆಹಾರ ಸಂಸ್ಕರಣೆ, ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ರಫ್ತಿನ ಬಗ್ಗೆ ಚರ್ಚೆಗಳು ನಡೆದಿವೆ ಎಂದು ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಹೇಳಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿ ಮತ್ತು ಪ್ರಗತಿಯ ಅಗತ್ಯತೆ ಬಗ್ಗೆ ಚರ್ಚಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.