ಭುವನೇಶ್ವರ: ಪ್ರಖ್ಯಾತ ಪುರಿ ಜಗನ್ನಾಥ ಮಂದಿರದ ಸುಮಾರು 35,572 ಎಕರೆ ಜಮೀನನ್ನು ಮಾರಾಟ ಮಾಡಲು ಒಡಿಶಾದ ನವೀನ್ ಪಟ್ನಾಯಕ್ ಸರ್ಕಾರ ನಿರ್ಧರಿಸಿದೆ. ಶಾಸಕ ಮೋಹನ್ ಚರಣ್ ಮಾಂಜಿ ಕೇಳಿದ್ದ ಪ್ರಶ್ನೆಯೊಂದಕ್ಕೆ ಸಚಿವ ಪ್ರತಾಪ್ ಜೇನಾ ವಿಧಾನಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಜಗನ್ನಾಥ ಮಂದಿರದ ಹೆಸರಲ್ಲಿ 24 ಜಿಲ್ಲೆಗಳಲ್ಲಿ ಒಟ್ಟು 60,426.943 ಎಕರೆ ಜಮೀನು ಇರುವುದನ್ನು ಗುರುತಿಸಲಾಗಿದೆ. ಇದುವರೆಗೆ ಮಂದಿರದ ಆಡಳಿತ ಮಂಡಳಿ 34,876.983 ಎಕರೆ ಜಮೀನನ್ನು ವಶಪಡಿಸಿಕೊಂಡಿದೆ. ಸರ್ಕಾರ ಅಂಗೀಕರಿಸಿರುವ 'ಸಮಾನ ನೀತಿ'ಗೆ ಅನುಗುಣವಾಗಿ, ವಶಪಡಿಸಿಕೊಂಡ ಜಮೀನನ್ನು ಮಾರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು. ಕಟಕ್ನಲ್ಲಿರುವ ಭಾರತಿ ಮಠದ ಒಂದು ಕಟ್ಟಡ ಮತ್ತು ಅನೇಕ ಜಿಲ್ಲೆಗಳಲ್ಲಿರುವ ಜಗನ್ನಾಥ ಭೂಮಿಯನ್ನು ಮಾರಲಾಗಿದೆ.
ಅದರಿಂದ ಬಂದ 11.20 ಕೋಟಿ ರೂ.ಗಳನ್ನು ದೇವಸ್ಥಾನದ ನಿಧಿಯಲ್ಲಿ ಠೇವಣಿ ಇಡಲಾಗಿದೆ. ಮಂದಿರದ ನಿಧಿಯನ್ನು 2023ರೊಳಗೆ ರೂ. 1,000 ಕೋಟಿಗೆ ಏರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.