ಪಾಲಕ್ಕಾಡ್, : ಕೇರಳವು ಮತ್ತೆ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವನ್ನೇ ಬಯಸುತ್ತಿದೆ. ಕೇರಳಕ್ಕೆ ಇದೀಗ ಯಾವುದೇ ವಿಶೇಷ ರಾಜಕೀಯ ಅಥವಾ ಬೇರೆ ರಾಜಕಾರಣಿಗಳ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ಕೆ. ಶೈಲಜಾ ಹೇಳಿದ್ದಾರೆ.
ಕೇರಳದ ಅಭಿವೃದ್ಧಿಗಾಗಿ ಪಿಣರಾಯಿ ಸರ್ಕಾರ ರಾಜ್ಯಕ್ಕೆ ಅಗತ್ಯವಿದೆ. ಕೇರಳಕ್ಕೆ ಇನ್ಯಾವ ಪಕ್ಷಗಳ ಅಗತ್ಯವಿಲ್ಲ. ಕೇರಳದಲ್ಲಿ ಮಹಿಳಾ ಸಿಎಂ ನೇತೃತ್ವದ ಸರ್ಕಾರ ಬೇಕು ಎನ್ನುವ ಕೂಗು ಇದೆ. ಆದರೆ ಇದು ಈಗ ಪ್ರಸ್ತುತವಲ್ಲ.
ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕಠಿಣ ಸಂದರ್ಭಗಳನ್ನು ಸರ್ಕಾರ ಎದುರಿಸಿದೆ, ಕೇರಳ ಜನತೆ ಮತ್ತೊಂದು ಸರ್ಕಾರ ರಚನೆಯಾದರೂ ಅದರ ನೇತೃತ್ವವನ್ನು ಪಿಣರಾಯಿ ವಿಜಯನ್ ಅವರೇ ವಹಿಸಬೇಕು ಎಂದು ಬಯಸುತ್ತಾರೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿದ ಘಟನೆಯ ಹಿಂದೆ ಕಾಂಗ್ರೆಸ್ ಲೀಗ್, ಬಿಜೆಪಿ ಮೈತ್ರಿಕೂಟ ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಬಹು ಪರಿಶೀಲನೆಗಳ ಬಳಿಕ ನಾಮಪತ್ರವನ್ನು ಸಲ್ಲಿಸಲಾಗುತ್ತದೆ. ಇಂತಹ ನಾಮಪತ್ರಗಳಲ್ಲಿ ತಪ್ಪುಗಳಿರುವುದು ಆಶ್ಚರ್ಯ ಎಂದಿದ್ದಾರೆ. ಇನ್ನು ಯುಡಿಎಫ್ನ ಪ್ರಣಾಳಿಕೆ ಕೇವಲ ಗಿಮಿಕ್ ಆಗಿದೆ. ಯುಡಿಎಫ್ ಆಳಿತದ ಅವಧಿಯಲ್ಲಿ ಆಸ್ಪತ್ರೆಗಳ ಸ್ಥಿತಿ ಹೇಗಿತ್ತು ಎಂದು ಅಲ್ಲರಿಗೂ ತಿಳಿದಿದೆ.
ಎಲ್ಡಿಎಫ್ ಸರ್ಕಾರವು ಆಸ್ಪತ್ರೆಗಳನ್ನು ಜನಸ್ನೇಹಿಯನ್ನಾಗಿ ಮಾಡಿದೆ ಹಾಗೂ ಆಧುನೀಕರಿಸಿದ ಆರೋಗ್ಯ ಕೇಂದ್ರಗಳನ್ನಾಗಿ ಮಾಡಿದೆ ಎಂದರು. ಮೂವರು ಎನ್ಡಿಎ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ತಲಚೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ಕಣ್ಣೂರು ಜಿಲ್ಲಾ ಘಟಕ ಅಧ್ಯಕ್ಷ ಹರಿದಾಸ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಅಭ್ಯರ್ಥಿ ನೀಡಿದ ಫಾರಂ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಹಿ ಇಲ್ಲ ಎಂಬ ಕಾರಣಕ್ಕೆ ನಾಮಪತ್ರವನ್ನು ತಿರಸ್ಕರಿಸಲಾಗಿದೆ.
ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ಸುಬ್ರಮಣ್ಯಂ ಅವರ ನಾಮಪತ್ರವನ್ನೂ ಇದೇ ಕಾರಣಕ್ಕೆ ತಿರಸ್ಕರಿಸಲಾಗಿದೆ.
ಇನ್ನೂ ಇಡುಕ್ಕಿಯ ದೇವಿಕುಲಂ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಧನಲಕ್ಷ್ಮಿ ಅವರ ನಾಮಪತ್ರ ತಿರಸ್ಕರಿಸಲಾಗಿದೆ. ಫಾರಂ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿಲ್ಲ ಎಂಬ ಕಾರಣಕ್ಕೆ ರಿಟರ್ನಿಂಗ್ ಅಧಿಕಾರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿಯನ್ನು ಬಿಜೆಪಿ ಬೆಂಬಲಿಸುತ್ತಿದೆ.
2017ರಲ್ಲಿ ಲೈಂಗಿಕ ಕಿರುಕುಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಲಯಾರ್ ಬಾಲಕಿಯರ ತಾಯಿ, ತನ್ನ ಪುತ್ರಿಯರಿಗೆ ನ್ಯಾಯ ದೊರೆಯದಿದ್ದಕ್ಕೆ ಪ್ರತಿಭಟನೆಯಾಗಿ ಧರ್ಮದಾಮ್ ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಂಗಳವಾರ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಒತ್ತಾಯಿಸಿ ರಾಜ್ಯಾದ್ಯಂತ ಮೆರವಣಿಗೆ ಪೂರ್ಣಗೊಂಡ ಬಳಿಕ ತ್ರಿಶೂರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ನಿರಾಕರಣೆ ಮತ್ತು ನಿಂದನೆಗೊಳಗಾಗಿರುವ ಎಲ್ಲಾ ಮಕ್ಕಳ ಪೋಷಕರ ಪರವಾಗಿ ಮುಖ್ಯಮಂತ್ರಿ ವಿರುದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.