ಕಾಸರಗೋಡು: ಕೇರಳದಲ್ಲಿ ಬಿಜೆಪಿ ಬೆಳವಣಿಗೆಗೆ ತಡೆಹಾಕುವ ನಿಟ್ಟಿನಲ್ಲಿ ಉಭಯರಂಗಗಳು, ಸುಳ್ಳು ಪ್ರಚಾರದ ಮೂಲಕ ಪಕ್ಷವನ್ನು ಮಣಿಸಲು ಯತ್ನಿಸುತ್ತಿದ್ದು, ಇದಕ್ಕೆ ಪೊಲೀಸರೂ ಕೈಜೋಡಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯನ್ನು ದಮನಿಸುವುದು ಸಿಪಿಎಂನ ಅಜೆಂಡವಾಗಿದ್ದು, ಇದರ ಭಾಗವಾಗಿ ಸುಳ್ಳುಆರೋಪ ಹೊರಿಸಲಾಗುತ್ತಿದೆ. ಮಂಜೇಶ್ವರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಸ್ವಇಚ್ಛೆಯಿಂದ ನಾಮಪತ್ರ ಹಿಂತೆಗೆದುಕೊಂಡಿದ್ದು, ಬಿಜೆಪಿ ಯಾವುದೇ ಆಮಿಷ ಅಥವಾ ಬೆದರಿಕೆಯೊಡ್ಡಿಲ್ಲ. ಚುನಾವಣಾ ಫಲಿತಾಂಶ ಕಳೆದು ಹಲವು ದಿನಗಳ ಬಳಿಕ ಕೆ. ಸುಂದರ ಅವರನ್ನು ಬಳಸಿಕೊಂಡು ಸಿಪಿಎಂ ಹಾಗೂ ಮುಸ್ಲಿಂಲೀಗ್ ಕುಟಲ ತಂತ್ರ ಹೆಣೆಯಲಾರಂಭಿಸಿದೆ. ಸುಂದರ ಅವರಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲೂ ಸಿಪಿಎಂ ಹಾಗೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಲಂಚ ನೀಡಿರುವ ಬಗ್ಗೆ ಕೆ. ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಿರುವ ಪೊಲೀಸರು, ಹಣ ಸ್ವೀಕರಿಸಿದ ಸುಂದರ ಅವರ ವಿರುದ್ಧವೂ ಕೇಸು ದಾಖಲಿಸಬೇಕು. ಪ್ರಕರಣದ ತನಿಖೆ ಹೆಸರಲ್ಲಿ ಕಾಸರಗೋಡು ಹಾಗೂ ಮಂಜೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬೇಟೆಯಾಡಲು ಪಕ್ಷ ಅವಕಾಶ ನೀಡದು. ಒಟ್ಟು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ಸತ್ಯಾವಸ್ಥೆ ಹೊರಗೆಡಹಬೇಕು ಎಂದವರು ತಿಳಸಿದರು.
ಬಿಜೆಪಿ ಹಾಗೂ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ವಿರುದ್ಧ ನಡೆಯುವ ಅಪ ಪ್ರಚಾರ ಹಾಗೂ ತೇಜೋವಧೆ ವಿರುದ್ಧ ಜೂನ್ 10 ರಂದು (ನಾಳೆ)ಜಿಲ್ಲೆಯ ಒಂದು ಸಾವಿರ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೋಳಾರು ಸತೀಶ್ಚಂದ್ರ ಭಂಡಾರಿ, ಸುಧಾಮ ಗೋಸಾಡ ಉಪಸ್ಥಿತರಿದ್ದರು.

