ಉಪ್ಪಳ: ಕಾಸರಗೋಡಿನ ಖ್ಯಾತ ಕನ್ನಡ ಕಟ್ಟಾಳು, ಸಾಹಿತ್ಯ, ಸಾಂಸ್ಕøತಿಕ ಸಂಘಟಕ, ನಿವೃತ್ತ ಮುಖ್ಯ ಶಿಕ್ಷಕ ರಾಘವ ಬಲ್ಲಾಳ್(74) ಅಲ್ಪಕಾಲದ ಅಸೌಖ್ಯದ ಬಳಿಕ ಇಂದು ನಿಧನರಾದರು.
ಕನ್ನಡಾಭಿಮಾನ, ಸಾಂಸ್ಕøತಿಕ ಸಂಘಟನೆಯ ಮೂಲಕ ಕಾಸರಗೋಡು ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದ್ದ ಬಲ್ಲಾಳರು ಚಿಪ್ಪಾರು ಬಲ್ಲಾಳ ಮನೆತನದವರು. ಶೈಕ್ಷಣಿಕ ಕ್ಷೇತ್ರದಲ್ಲಿ ಎಲೆಮರೆಯ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಮುನ್ನೆಲೆಗೆ ತರುವಲ್ಲಿ ಅಪಾರತ ಶ್ರಮ ವಹಿಸಿದ್ದ ಅವರು ದಸರಾ ನಾಡಹಬ್ಬ ಉತ್ಸವ, ಶಾಲಾ ಕಲೋತ್ಸವಗಳ ಪೂರ್ಣ ಯಶಸ್ವಿಗೆ ಹಗಲಿರುಳೆನ್ನದೆ ದುಡಿದಿದ್ದರು. ಬಲ್ಲಾಳರ ಸಂಚಾಲಕತ್ವದ ಎಲ್ಲಾ ಕಾರ್ಯಕ್ರಮಗಳೂ ಅತೀ ಯಶಸ್ವಿಯಾಗಿ ಗಮನಾರ್ಹವಾಗಿ ದಾಖಲಾಗುತ್ತಿತ್ತು. 1998-99ನೇ ಸಾಲಿನ ರಾಜ್ಯ ಅಧ್ಯಾಪಕ ಪ್ರಶಸ್ತಿಗೆ ಭಾಜನರಾದ ಬಲ್ಲಾಳರಿಗೆ ಜಿಲ್ಲೆ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕ ಗೌರವಾಭಿನಂದನೆಗಳು ಸಂದಿವೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಸತತ ಐದು ವರ್ಷಗಳ ಕಾಲ ಮುನ್ನಡೆಸಿದ್ದರು. ಕಸಾಪ ಕೇರಳ ಗಡಿನಾಡ ಘಟಕದ ಗೌರವಾಧ್ಯಕ್ಷರಾಗಿಕೇರಳ ಕನ್ನಡ ಪಠ್ಯಪುಸ್ತಕ ನಿರ್ಮಾಣ ಸಮಿತಿಯ ಸದಸ್ಯ, ನವೋದಯ ಕ್ಷೇಮಾಭಿವೃದ್ದಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಚಿಪ್ಪಾರು ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಆಡಳಿತ ಸಮಿತಿ ಉಪಾಧ್ಯಕ್ಷ ಸಹಿತ ಅನೇಕ ಸಂಘಟನೆಗಳ ಚುಕ್ಕಾಣಿ ಹಿಡಿದು ಮುನ್ನಡೆಸಿದ್ದರು.
ಮೃತರು ಪತ್ನಿ, ಪುತ್ರಿ ಸಹಿತ ಅನೇಕ ಮಂದಿ ಅಭಿಮಾನಿಗಳು, ಶಿಷ್ಯವರ್ಗ, ಬಂಧುಗಳನ್ನು ಅಗಲಿದ್ದಾರೆ.