ನವದೆಹಲಿ: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಮಾಸ್ಕ್ ಧರಿಸಲು, ಪರಸ್ಪರ ಅಂತರವನ್ನು ಕಾಯ್ದುಕೊಳ್ಳಲು ಹೀಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಜನ ಸಾಮಾನ್ಯರಿಗೆ ಸರ್ಕಾರವು ಆದೇಶಿಸುತ್ತದೆ.
ಆದರೆ ಜನರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಎಡವಟ್ಟು ಮಾಡಿದರೆ ಹೇಗಿರಬಹುದು? ಹೌದು, ಉತ್ತರಾಖಂಡದಲ್ಲಿ ಸಚಿವರೊಬ್ಬರು ಸಭೆಯಲ್ಲಿ ಕಾಲಿಗೆ ಮಾಸ್ಕ್ ನೇತುಹಾಕಿದ ಘಟನೆ ನಡೆದಿದೆ.
: ಬಂಗಾಳದಂತೆ ಉ.ಪ್ರದೇಶದಲ್ಲೂ ಬಿಜೆಪಿ ವಿರೋಧಿ ವಾತಾವರಣ ಸೃಷ್ಟಿ: ಟಿಕಾಯತ್
ಉತ್ತರಾಖಂಡದ ಬಿಜೆಪಿ ಸರ್ಕಾರದ ಸಚಿವ ಸ್ವಾಮಿ ಯತೀಶ್ವರಾನಂದ ಅವರೇ ಈ ವಿಚಿತ್ರ ವರ್ತನೆ ತೋರಿದ್ದಾರೆ. ಸಭೆಯಲ್ಲಿರುವ ಇತರೆ ನಾಲ್ವರು ಸಹ ಮಾಸ್ಕ್ ಧರಿಸಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.
ಉತ್ತರಾಖಂಡದ ಕಾಂಗ್ರೆಸ್ ವಕ್ತಾರೆ ಗರೀಮಾ ಮೆಹ್ರಾ ದಸೌನಿ, ಈ ಚಿತ್ರವನ್ನು ಹಂಚಿದ್ದು, ವೈರಲ್ ಆಗಿದೆ.
ಆಡಳಿತ ಪಕ್ಷದ ನಿಷ್ಠೆ ಇದಾಗಿದ್ದು, ಬಳಿಕ ಮಾಸ್ಕ್ ಧರಿಸದ್ದಕ್ಕೆ ಬಡವರನ್ನು ಶಿಕ್ಷಿಸುತ್ತಾರೆ. ಕೋವಿಡ್ ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಾಗ ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹಾಗಿರುವಾಗ ಜನರಿಗೆ ಮಾದರಿಯಾಗಬೇಕಾಗಿರುವ ಸಚಿವರೇ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯ ವಹಿಸುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.