ಕೊರ್ಬಾ: ಪಾರ್ಶ್ವವಾಯುಪೀಡಿತ ವ್ಯಕ್ತಿಯೊಬ್ಬರಿಗೆ ಪರಿಹಾರ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಡದ ಕೊರ್ಬಾ ಜಿಲ್ಲಾ ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಯಿಂದ ಹೊರಬಂದು ತೀರ್ಪು ಪ್ರಕಟಿಸಿದ್ದಾರೆ.
2018ರ ಡಿಸೆಂಬರ್ನಲ್ಲಿ ದ್ವಾರಿಕಾ ಪ್ರಸಾದ್ ಕನ್ವರ್ (42) ಎನ್ನುವವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಅಂಗವಿಕಲರಾಗಿದ್ದರು. ಬಳಿಕ ಪಾರ್ಶ್ವವಾಯು ಪೀಡಿತರಾಗಿದ್ದರು.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ನಡೆದ ಅಪಘಾತ ಪರಿಹಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕನ್ವರ್ ಅವರು ನ್ಯಾಯಾಲಯದ ಕೊಠಡಿ ಹೊರಗೆಯೇ ಇದ್ದರು. ಕನ್ವರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಂಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಪಿ. ವರ್ಮಾ ಅವರು, ಕೊಠಡಿಯಿಂದ ಹೊರಬಂದರು. ವಾಹನಲ್ಲಿದ್ದ ಕನ್ವರ್ ಅವರಿದ್ದ ಸ್ಥಳಕ್ಕೆ ತೆರಳಿದ ವರ್ಮಾ ಅವರು, ಅಲ್ಲಿಯೇ ತೀರ್ಪು ಪ್ರಕಟಿಸಿದರು.
ಕನ್ವರ್ ಅವರಿಗೆ ₹20 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ವರ್ಮಾ ಅವರು ಆದೇಶಿಸಿದರು. ಕಳೆದ ಮೂರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.