ನವದೆಹಲಿ: ಸದ್ಯ ದೇಶಾದ್ಯಂತ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ ಕೂಡ ಒಂದಾಗಿದ್ದು, ಈ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರನ ಬಂಧನದಿಂದಾಗಿ ದೇಶದ ಗಮನ ಸೆಳೆದಿದೆ.
ಇದೀಗ ಮಾದಕ ವಸ್ತು ಬಳಕೆಯ ಬಗ್ಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕೆಟಿಎಸ್ ತುಳಸಿ ಅವರು ಪ್ರತಿಕ್ರಿಯಿಸಿದ್ದು, ಸಮತೋಲಿತ ಪ್ರಮಾಣದಲ್ಲಿ ಡ್ರಗ್ಸ್ ಬಳಕೆಗೆ ಸರಕಾರ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ.
ಮದ್ಯ, ಗುಟ್ಕಾ, ತಂಬಾಕು ಬಳಕೆಗೆ ಹೇಗೆ ಅವಕಾಶ ನೀಡಿದ್ದಾರೋ ಅದೇ ರೀತಿ ತೆರಿಗೆ ಪಾವತಿಸಿ ಮಾದಕ ದ್ರವ್ಯ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಸಂಸದರು ಸಲಹೆ ನೀಡಿದ್ದಾರೆ.
ಡ್ರಗ್ಸ್ ಎಂಬುದು ಬಹಳ ಸಂದರ್ಭದಲ್ಲಿ ನಮ್ಮ ಜೀವನದ ಭಾಗವಾಗುತ್ತದೆ. ಜೀವನದಲ್ಲಿ ನೋವುಗಳನ್ನು ಡ್ರಗ್ಸ್ ಕಡಿಮೆ ಮಾಡುತ್ತದೆ. ಮದ್ಯ, ತಂಬಾಕು, ಗುಟ್ಕಾ ಕೂಡ ನಮಗೆ ಹಾನಿ ಮಾಡುತ್ತದೆ. ಆದರೆ ಅವುಗಳ ಬಳಕೆಗೆ ಅನುಮತಿಸಲಾಗಿದೆ. ಅದೇ ರೀತಿ ಏಕೆ ಡ್ರಗ್ಸ್ ಸೇವಿಸಲು ಅನುಮತಿಸಬಾರದು? ಹೆಚ್ಚಿನ ಸಂದರ್ಭಗಳಲ್ಲಿ ಔಷಧಿಗಳ ಮೂಲಕ ಡ್ರಗ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಅಂತಹದರಲ್ಲಿ ಮಾದಕ ಡ್ರಗ್ಸ್ ಬಳಕೆಗೆ ಏಕೆ ಅವಕಾಶ ನೀಡಬಾರದು?' ಎಂದು ತುಳಸಿ ಪ್ರಶ್ನಿಸಿದ್ದಾರೆ.
1985ರ ನಾರ್ಕೋಟಿಕ್ ಡ್ರಗ್ಸ್ ಆಯಂಡ್ ಸೈಕೋಟ್ರೋಪಿಕ್ ಸಬ್ ಸ್ಟೆನ್ಸ್ ಆಯಕ್ಟ್ ಗೆ ತಿದ್ದುಪಡಿ ಅಗತ್ಯವಿದೆ. ಹಲವು ಪ್ರಕರಣಗಳಲ್ಲಿ ಕೆಲವರಿಗೆ ಕಿರುಕುಳ ನೀಡಲು ಕಾಯ್ದೆ ಬಳಸುತ್ತಿರುವ ದಾಖಲೆಗಳಿವೆ ಎಂದು ಅವರು ವಿವರಿಸಿದ್ದಾರೆ.




