ನವದೆಹಲಿ: ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಪ್ರಯಾಣಿಕರ ಸೇವೆಗಳನ್ನು ಹಂತಹಂತವಾಗಿ ಸರಳ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ಹೊಸ ರೈಲು ಸಂಖ್ಯೆ ಹಾಗೂ ಸಂಬಂಧಿತ ಇತರೆ ಮಾಹಿತಿಯ ಡೇಟಾವನ್ನು ನವೀಕರಣ ಮಾಡಲು ಮುಂದಾಗಿದೆ. ಈ ಕಾರಣದಿಂದಾಗಿ ಮುಂದಿನ ಏಳು ದಿನಗಳವರೆಗೆ ನೀವು ಪ್ರತಿ ದಿನ ಆರು ಗಂಟೆಗಳ ಕಾಲ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಅಥವಾ ರದ್ದು ಮಾಡಲು ಸಾಧ್ಯವಾಗುವುದಿಲ್ಲ.
ರೈಲ್ವೇಸ್ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (ಪಿಆರ್ಎಸ್) ಇಂದಿನಿಂದ ಆರಂಭವಾಗಿ ಮುಂದಿನ ಏಳು ದಿನಗಳವರೆಗೆ ರಾತ್ರಿಯ ಸಮಯದಲ್ಲಿ 6 ಗಂಟೆಗಳ ಸ್ಥಗಿತವಾಗಲಿದೆ. ಈ ಸಂದರ್ಭದಲ್ಲಿ ಸಿಸ್ಟಮ್ ಡೇಟಾದ ನವೀಕರಣ ಮಾಡಲಾಗುತ್ತದೆ. ಹಾಗೆಯೇ ಹೊಸ ರೈಲು ಸಂಖ್ಯೆಗಳ ನವೀಕರಣ ಇತ್ಯಾದಿ ಅಪ್ಗ್ರೇಡ್ ಕಾರ್ಯವನ್ನು ಮಾಡಲಾಗುತ್ತದೆ. ನವೆಂಬರ್ 14-15 ಮಧ್ಯರಾತ್ರಿಯಿಂದ ನವೆಂಬರ್ 20-21 ರ ಮಧ್ಯರಾತ್ರಿಯವರೆಗೆ ಒಟ್ಟು ಏಳು ದಿನಗಳ ಕಾಲ ಜನರಿಗೆ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಅಥವಾ ರದ್ದು ಮಾಡಲು ಸಾಧ್ಯವಾಗುವುದಿಲ್ಲ. ರಾತ್ರಿ 23:30 ಗಂಟೆಗೆ ಪ್ರಾರಂಭವಾಗಿ ಮುಂಜಾನೆ 05:30 ಗಂಟೆವರೆಗೆ ಸೇವೆ ಸ್ಥಗಿತವಾಗಲಿದೆ.
ಇನ್ನು ಈ ಸಂದರ್ಭದಲ್ಲಿ ವಿಶೇಷ ದರದಲ್ಲಿ ವಿಶೇಷ ರೈಲುಗಳು ಇರುವ ಸಾಧ್ಯತೆಗಳು ಇದೆ ಎಂದು ಮಾಧ್ಯಮಗಳ ವರದಿಯು ಉಲ್ಲೇಖ ಮಾಡಿದೆ. ಈಗ ಭಾರತೀಯ ರೇಲ್ವೆಯು ಎಂಎಸ್ಪಿಸಿ ಹಾಗೂ ಹೆಚ್ಎಸ್ಪಿ ರೈಲುಗಳ ಸೇವೆಯನ್ನು ಆರಂಭ ಮಾಡಲು ಮುಂದಾಗಿದೆ.
ಸಾಮಾನ್ಯವಾಗಿ ಜನರು ಯಾವ ಸಂದರ್ಭದಲ್ಲಿ ಹೆಚ್ಚಾಗಿ ಈ ಸೇವೆಯನ್ನು ಬಳಸುವುದಿಲ್ಲ ಎಂದು ನೋಡಿಕೊಂಡು, ಆ ಸಮಯದಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ, ರದ್ಧತಿ ಸೇವೆಯನ್ನು ಸ್ಥಗಿತ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಂಡು ಎಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಉಂಟಾಗದಂತೆ ರಾತ್ರಿ ಹೊತ್ತಿನಲ್ಲಿ ಸೇವೆ ಸ್ಥಗಿತ ಮಾಡಲಾಗಿದೆ.ಈ ಅವಧಿಯಲ್ಲಿ ರೈಲ್ವೆ ಸಿಬ್ಬಂದಿಗಳು ಈ ಸಮಯದಲ್ಲಿ ರೈಲುಗಳು ಪ್ರಾರಂಭವಾಗುವ ಮುಂಗಡ ಚಾರ್ಟ್ ಅನ್ನು ಖಚಿತಪಡಿಸಿಕೊಳ್ಳುತ್ತಾರೆ. ಪಿಆರ್ಎಸ್ ಸೇವೆಗಳನ್ನು ಹೊರತುಪಡಿಸಿ, 139 ಸೇವೆಗಳು ಸೇರಿದಂತೆ ಎಲ್ಲಾ ಇತರ ವಿಚಾರಣೆ ಸೇವೆಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಪ್ರಯಾಣಿಕರ ಸೇವೆಗಳನ್ನು ಸಾಮಾನ್ಯಗೊಳಿಸಲು ಮತ್ತು ಮೇಲ್ದರ್ಜೆಗೇರಿಸುವ ಈ ಪ್ರಯತ್ನದಲ್ಲಿ ಸಚಿವಾಲಯಕ್ಕೆ ಜನರು ಬೆಂಬಲ ನೀಡಬೇಕು ಎಂದು ಕೂಡಾ ರೈಲ್ವೇ ಸಚಿವಾಲಯವು ಪ್ರಯಾಣಿಕರಿಗೆ ವಿನಂತಿ ಮಾಡಿದೆ.
ನಿನ್ನೆಯಷ್ಟೇ ಭಾರತೀಯ ರೈಲ್ವೆಯು ಪ್ರಮುಖ ಮಾಹಿತಿಯನ್ನು ನೀಡಿದೆ. ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಭಾರತೀಯ ರೈಲ್ವೆ ಆರಂಭಿಸಿದ್ದ ಕೆಲವು ವಿಶೇಷ ರೈಲುಗಳಲ್ಲಿ ಇನ್ನು ಮುಂದೆ ವಿಶೇಷ ಹಣೆಪಟ್ಟಿ ಇರಲ್ಲ. ರೈಲು ಪ್ರಯಾಣ ದರವು ಕೊರೊನಾ ವೈರಸ್ ಸೋಂಕಿಗೂ ಮುನ್ನ ಎಷ್ಟು ಇತ್ತು, ಅಷ್ಟೇ ಇರಲಿದೆ ಎಂದು ಮಾಹಿತಿ ನೀಡಿದೆ. ವಿಶೇಷ ರೈಲುಗಳ ಸೇವೆಯನ್ನು ಹಿಂದಕ್ಕೆ ಪಡೆದಿರುವ ರೈಲ್ವೇ ಇಲಾಖೆ ಅಲ್ಲದೆ ರೈಲು ಪ್ರಯಾಣ ದರವನ್ನೂ ಕೂಡ ಕೋವಿಡ್ ಸಾಂಕ್ರಾಮಿಕ ರೋಗದ ಮುಂಚಿನ ದಿನಗಳಲ್ಲಿದ್ದ ದರಗಳಿಗೆ ಇಳಿಕೆ ಮಾಡುವಂತೆ ಆದೇಶ ನೀಡಿದೆ.
ವಿಶೇಷ ರೈಲು ಸೇವೆಯನ್ನು ನಿಲ್ಲಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೂಚಿಸಿದ್ದಾರೆ. ವಿಶೇಷ ರೈಲಿನಲ್ಲಿ ಪ್ರಯಾಣಿಕರು ಸಾಮಾನ್ಯ ರೈಲುಗಳಿಗಿಂತ ಶೇಕಡಾ 30 ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತಿತ್ತು. ಈಗ ಈ ವಿಶೇಷ ಎಂಬ ಟ್ಯಾಗ್ ಅನ್ನು ತೆಗೆಯಲಾಗುವ ಕಾರಣದಿಂದಾಗಿ ಪ್ರಯಾಣಿಕರು ಸಾಮಾನ್ಯ ದರ ಜಾರಿಗೆ ಬರಲಿದೆ.