ನವದೆಹಲಿ :ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೊರತಾಗಿ 2021ರ ಜನಗಣತಿಯಲ್ಲಿ ಜಾತಿವಾರು ದತ್ತಾಂಶವನ್ನು ಸಂಗ್ರಹಿಸುವ ಯಾವುದೇ ಯೋಜನೆ ಹಮ್ಮಿಕೊಂಡಿವೆಂದು ಕೇಂದ್ರ ಸರಕಾರವು ಪುನರುಚ್ಚರಿಸಿದೆ. ಸರಕಾರದ ನೀತಿಯ ವಿಷಯ ಇದೆಂದು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯಸಭೆಗೆ ತಿಳಿಸಿದೆ.
''ಭಾರತ ಸರಕಾರವು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗಿಂತ ಹೊರತಾದ ಜಾತಿವಾರು ಗಣತಿಯನ್ನು ಸ್ವಾತಂತ್ರಾ ನಂತರ ನಡೆಸಿಲ್ಲ'' ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ಜಾತಿ ಆಧಾರಿತ ಜನಗಣತಿಯನ್ನು ನಡೆಸುವ ಕುರಿತ ನಿರ್ಣಯವನ್ನು ಆಂಧ್ರಪ್ರದೇಶ ವಿಧಾನಸಭೆಯು ಅಂಗೀಕರಿಸಿರುವುದು ತನ್ನ ಗಮನಕ್ಕೆ ಬಂದಿರುವುದಾಗಿಯೂ ಸಚಿವಾಲಯವು ಸದನಕ್ಕೆ ತಿಳಿಸಿತು.
''ರಾಷ್ಟೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್)ಯು ನಿರ್ದಿಷ್ಟವಾಗಿ ದೇಶದ ಜನಸಂಖ್ಯೆಯನ್ನು ಅಥವಾ ಯಾವುದೇ ಸಾಮಾಜಿಕ ಸಮೂಹವನ್ನು ನಡೆಸುವುದಕಾಗಿ ರೂಪುಗೊಂಡಿದ್ದಲ್ಲ. ಶ್ರೇಣೀಕರಣ ಉದ್ದೇಶಗಳಿಗಾಗಿ ಮಾತ್ರವೇ ಎನ್ಎಸ್ಎಸ್ ಮೂಲಕ ಕುಟುಂಬ ಆಧಾರಿತ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಜನಸಂಖ್ಯಾ ಗಣತಿಯು ಜಾತಿವಾರು ಅಥವಾ ಹಿಂದುಳಿದ ವರ್ಗಗಳ ಗಣತಿಗೆ ಉತ್ತಮ ಸಾಧನವಲ್ಲ'' ಎಂದು ಎಂದು ನಿತ್ಯಾನಂದರಾಯ್ ತಿಳಿಸಿದರು. ಕೇಂದ್ರ ಸಚಿವರು ಸೇರಿದಂತೆ ಸಂಬಂಧಿತರ ಜೊತೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ಜನಗಣತಿಯ ವೇಳಾಪಟ್ಟಿಯನ್ನು ರೂಪಿಸಲಾಗುತ್ತದೆ ಎಂದರು.
ಕುತೂಹಲಕರವೆಂಬಂತೆ ಸುಪ್ರೀಂಕೋರ್ಟ್ ಬುಧವಾರ ನೀಡಿದ ತೀರ್ಪೊಂದರಲ್ಲಿ 2011ರ ಸಾಮಾಜಿಕ-ಆರ್ಥಿಕ ಹಾಗೂ ಜಾತಿ ಗಣತಿಗೆ ಸಂಬಂಧಿಸಿದ ಕಚ್ಚಾ ದತ್ತಾಂಶಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಮಹಾರಾಷ್ಟ್ರ ಸರಕಾರದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಸಂವಿಧಾನವು ಜನಸಂಖ್ಯೆಯಲ್ಲಿ ನಂಬಿಕೆ ಇರಿಸಿದೆಯೇ ಹೊರತು ಜಾತಿ ಅಥವಾ ಧರ್ಮವನ್ನಲ್ಲ. ಜಾತಿ ಗಣತಿ ಇರಬಾರದು ಎಂದು ಕಾನೂನು ಹೇಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿತು.
ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಲು ತಾನು ಬಯಸಿರುವುದಾಗಿ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿತ್ತು.