ನವದೆಹಲಿ:ದೇಶದಲ್ಲಿಯ ಪ್ರಸ್ತುತ ಸನ್ನಿವೇಶಗಳಲ್ಲಿ ಕೊರೋನವೈರಸ್ ಲಸಿಕೆಗಳು ಪರಿಣಾಮಕಾರಿ ಆಗದಿರಬಹುದಾದ ಸಾಧ್ಯತೆಯಿದೆ ಎಂದು ಭಾರತದ ಕೋವಿಡ್-19 ಕಾರ್ಯಪಡೆಯ ಡಾ.ವಿ.ಕೆ.ಪೌಲ್ ಅವರು ಹೇಳಿದ್ದಾರೆ.
'ಕಳೆದ ಮೂರು ವಾರಗಳಿಂದ ಒಮೈಕ್ರಾನ್ ನಮ್ಮೊಂದಿಗಿರುವ ಹಿನ್ನೆಲೆಯಲ್ಲಿ ಇಂತಹ ಶಂಕೆಗಳು ನಮ್ಮಲ್ಲಿ ಮೂಡಿವೆ.
ಅವುಗಳಲ್ಲಿ ಕೆಲವು ನಿಜವಾಗಿರಬಹುದು,ಆದರೆ ಅಂತಿಮ ಚಿತ್ರಣವಿನ್ನೂ ನಮ್ಮ ಬಳಿ ಲಭ್ಯವಿಲ್ಲ ಮತ್ತು ಅದು ನಮ್ಮನ್ನು ಚಿಂತೆಗೀಡು ಮಾಡಿದೆ' ಎಂದು ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಡಾ.ಪೌಲ್ ಹೇಳಿದರು.
ವಿಶ್ವಾದ್ಯಂತ ಹೊಸ ಒಮೈಕ್ರಾನ್ ಪ್ರಭೇದದ ಹರಡುವಿಕೆಯು ಹೆಚ್ಚುತ್ತಿರುವ ನಡುವೆಯೇ ಡಾ.ಪೌಲ್ ಅವರ ಈ ಹೇಳಿಕೆ ಹೊರಬಿದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಪ್ರಕಾರ,ನೂತನ ವೈರಸ್ ಈವರೆಗೆ 77 ದೇಶಗಳಲ್ಲಿ ಪತ್ತೆಯಾಗಿದ್ದು, ಕೊರೋನವೈರಸ್ನ ಇತರ ಯಾವುದೇ ರೂಪಾಂತರಿತ ತಳಿಗಿಂತ ವೇಗವಾಗಿ ಹರಡುತ್ತಿದೆ.
ಬುಧವಾರ ಬೆಳಿಗ್ಗೆಯವರೆಗೆ ಭಾರತದಲ್ಲಿ ಒಮೈಕ್ರಾನ್ನ 60 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಮೊದಲ ಬಾರಿಗೆ ಎರಡು ಪ್ರಕರಣಗಳು ಡಿ.2ರಂದು ಕರ್ನಾಟಕದಲ್ಲಿ ಪತ್ತೆಯಾಗಿದ್ದವು.
ಹೊಸ ರೂಪಾಂತರಿಗಳನ್ನು ಗುರಿಯಾಗಿಸಿಕೊಳ್ಳುವ ಮತ್ತು ರೂಪಾಂತರಿಗಳ ಬದಲಾಗುತ್ತಿರುವ ಸ್ವರೂಪವನ್ನು ಅನುಸರಿಸುವ ಲಸಿಕೆಯನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಹೇಳಿದ ಡಾ.ಪೌಲ್,'ಅಗತ್ಯಕ್ಕೆ ತಕ್ಕಂತೆ ಲಸಿಕೆಗಳನ್ನು ಮಾರ್ಪಡಿಸಲು ನಮಗೆ ಸಾಧ್ಯವಾಗುವಂತಹ ಸ್ಥಿತಿಯನ್ನು ಹೊಂದಿರಲು ನಾವು ಸಜ್ಜಾಗಬೇಕು. ಇದು ಪ್ರತಿ ಮೂರು ತಿಂಗಳಿಗೊಮ್ಮೆ ಸಂಭವಿಸದಿರಬಹುದು,ಆದರೆ ಬಹುಶಃ ಪ್ರತಿ ವರ್ಷಕ್ಕೊಮ್ಮೆ ಸಂಭವಿಸಬಹುದು ಮತ್ತು ಇದು ಪರಿಗಣಿಸಬೇಕಾದ ಅಂಶವಾಗಿದೆ ' ಎಂದರು.
ಸಾರ್ವತ್ರಿಕ ಲಸಿಕೆ ವ್ಯಾಪ್ತಿಯನ್ನು ಮತ್ತು ಲಸಿಕೆ ಅಭಿಯಾನದಲ್ಲಿ ಯಾವುದೇ ವ್ಯಕ್ತಿ ಹಿಂದುಳಿದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಈಗಿನ ಆದ್ಯತೆಯಾಗಿದೆ. ವಿಶ್ವದಲ್ಲಿ ಈಗಲೂ 360 ಕೋ.ಜನರು ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಅವರು ಹೇಳಿದರು.
'ತೀವ್ರ ಸವಾಲುಗಳನ್ನು ಎದುರಿಸಲು ಅತ್ಯುತ್ತಮ ಗುಣಮಟ್ಟದ ವಿಜ್ಞಾನದಲ್ಲಿ ನಾವು ಹೂಡಿಕೆ ಮಾಡುವ ಅಗತ್ಯವಿದೆ. ವಿಜ್ಞಾನದಲ್ಲಿ ನಮ್ಮ ರಾಷ್ಟ್ರೀಯ ಹೂಡಿಕೆಯು ಸಂಪೂರ್ಣವಾಗಿ ಸಾರ್ವಜನಿಕ ಹಣವಾಗಿದೆ ' ಎಂದ ಡಾ.ಪೌಲ್,'ಸಾಂಕ್ರಾಮಿಕವು ಇನ್ನೂ ಅಂತ್ಯಗೊಂಡಿಲ್ಲ. ಸಾಂಕ್ರಾಮಿಕವು ನಾವು ಎದುರಿಸಬಹುದಾದ ಸೌಮ್ಯ ಸ್ವರೂಪದ ಸ್ಥಳೀಯ ಕಾಯಿಲೆಯಾಗಿ ಬದಲಾಗಬಹುದು ಎಂಬ ನಿರೀಕ್ಷೆಯೊಂದಿಗೆ ನಾವು ಸಾಗುತ್ತಿದ್ದೇವಾದರೂ ಅನಿಶ್ಚಿತತೆಯನ್ನು ಎದುರಿಸುವುದನ್ನು ನಾವು ಮುಂದುವರಿಸಲಿದ್ದೇವೆ 'ಎಂದರು.