ಪೆರ್ಲ: ಜೀವನಾನುಭವವೇ ನನ್ನ ಸಾಹಿತ್ಯದ ಅಭಿವೃಕ್ತಿ ಮಾಧ್ಯಮವಾಗಿದೆ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ನವಿರಾದ ಹಾಸ್ಯದ ಮೂಲಕ ಗದ್ಯಪದ್ಯ ಬರೆದಿದ್ದೇನೆ. ನಾನು ಬಾಳಿನಲ್ಲಿ ಆರೋಗ್ಯ ಕಳಕೊಂಡೆ. ಹುಟ್ಟಿ ಬರುವಾಗಲೇ ರೋಗವನ್ನು ಹೊತ್ತು ತಂದೆ. ನೋವು ಸಂಕಟದ ನಡುವೆಯೂ ರಮ್ಯ ರೋಚಕ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿದ್ದೇನೆ. ಓದುಗರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಸಾಹಿತ್ಯಿಕ ಜೀವನದಲ್ಲಿ ಸಾರ್ಥಕ್ಯ ಪಡೆದಿದ್ದೇನೆ ಎಂದು ಪ್ರಸಿದ್ದ ಸಾಹಿತಿ ಹರೀಶ್ ಪೆರ್ಲ ಹೇಳಿದರು.
ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಗ್ರಂಥಾಲಯದ ವಿಂಶತಿ ವರ್ಷಾಚರಣೆಯಂಗವಾಗಿ ಗುರುನಮನ ಸ್ವೀಕರಿಸಿ ಅವರು ಮಾತನಾಡಿದರು.
ಹರೀಶ್ ಪೆರ್ಲ ಅವರ ಪೆರ್ಲದ ಸ್ವಗೃಹ ಗುಲಾಬಿಯಲ್ಲಿ ಶುಕ್ರವಾರ ಕಾರ್ಯಕ್ರಮ ನಡೆಯಿತು. ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ ಕೆ.ವಾಮನ ರಾವ್ ಬೇಕಲ್ ಮತ್ತು ಕೋಶಾಧಿಕಾರಿ ಕೆ.ಪಿ.ಸಂಧ್ಯಾರಾಣಿ ಗುರುನಮನ ಸಲ್ಲಿಸಿದರು.
ಹರೀಶ್ ಪೆರ್ಲ ಅವರ ಸಹೋದರಿ ಗೀತಾ ಜಿ.ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸಾಹಿತಿ ವಿ.ಬಿ.ಕುಳಮರ್ವ, ಸವಿಹೃದಯದ ಕವಿ ಮಿತ್ರರು ಸಂಸ್ಥೆಯ ಸಂಚಾಲಕ ಸುಭಾಷ್ ಪೆರ್ಲ, ನಿವೃತ್ತ ಅಧ್ಯಾಪಕ, ಕನ್ನಡ ಭವನ ಗ್ರಂಥಾಲಯದ ನಿರ್ದೇಶಕ ವಿಶಾಲಾಕ್ಷ ಪುತ್ರಕಳ, ಗೌರವಾಧ್ಯಕ್ಷ ಪ್ರದೀಪ್ ಬೇಕಲ್, ವಿಜಯಲಕ್ಷ್ಮಿ ಮೊದಲಾದವರು ಹರೀಶ್ ಪೆರ್ಲ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಅಭಿಮಾನಪೂರ್ವಕ ಮಾತನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಗಮಕ ವಾಚನ - ವ್ಯಾಖ್ಯಾನದಧ್ವನಿ ಮುದ್ರಣ ಬಿತ್ತರಿಲಾಯಿತು. ಕೊಚ್ಚಿ ಗೋಪಾಲಕೃಷ್ಣ ಭಟ್ ವಾಚನ ಮಾಡಿದರು. ಕಾವ್ಯ ನಮನ ಕಾರ್ಯಕ್ರಮದಲ್ಲಿ ವಿ.ಬಿ.ಕುಳಮರ್ವ, ನರಸಿಂಹ ಭಟ್ ಯೇತಡ್ಕ, ನಿರ್ಮಲಾ ಶೇಷಪ್ಪ ಖಂಡಿಗೆ, ನಾರಾಯಣ ನಾಯಕ್ ಕುದುಕ್ಕೋಳಿ, ವಿಜಯ ಕಾನ ಸ್ವರಚಿತ ಕವನಗಳನ್ನು ವಾಚಿಸಿದರು. ಸುಂದರ ಬಾರಡ್ಕ ಅವರು ಹರೀಶ್ ಪೆರ್ಲರ ಕವನವನ್ನು ಓದಿದರು.
ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥಾಪಕ ಕೆ.ವಾಮನ ರಾವ್ ಬೇಕಲ್ ವಿಂಶತಿ ವರ್ಷಾಚರಣೆಯಂಗವಾಗಿ ಆಯೋಜಿಸಿದ ಒಟ್ಟು ಕಾರ್ಯಕ್ರಮಗಳ ಮಾಹಿತಿ ನೀಡಿದರು. ಪ್ರಧಾನÀ ಕಾರ್ಯದರ್ಶಿ ಜಗದೀಶ್ ಕೂಡ್ಲು ನಿರೂಪಿಸಿ ವಂದಿಸಿದರು. ಸವಿಹೃದಯದ ಕವಿ ಮಿತ್ರರು, ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ, ಸಾಹಿತ್ಯ ಸುರಭಿ ಪೆರ್ಲ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

