ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನವೇ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಕಚೇರಿಗೆ ಆಗಮಿಸಿದ ಕಿಶೋರ್ ಅವರು ತಾವು ಈಗ ಹೊಸತೇನಾದರೂ ಮಾಡುವ ಸಮಯ ಬಂದಿದೆ ಎಂದು ಹೇಳಿದರು. ಅಲ್ಲದೆ 'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ಉತ್ತರಾಖಂಡದ ಅಭಿವೃದ್ಧಿ ಸಾಧ್ಯ ಎಂದು ನಾನು ಭಾವಿಸುತ್ತೇನೆ ಮತ್ತು ಉತ್ತರಾಖಂಡವನ್ನು ಉತ್ತಮ ರಾಜ್ಯವಾಗಿಸಲು ನಾನು ಕೆಲಸ ಮಾಡಲು ಬಯಸುತ್ತೇನೆ' ಎಂದು ಹೇಳಿದರು.
ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡಿದ್ದರ ಹಿನ್ನೆಲೆ ಕೇಳಿದಾಗ ಕಿಶೋರ್ ಉಪಾಧ್ಯಾಯ ಅವರು ತಾವು ಬಿಜೆಪಿ ನಾಯಕರೊಡನೆ ಇರುವ ಚಿತ್ರವು ವೈರಲ್ ಆಗಿದ್ದೇ ತಮ್ಮ ಉಚ್ಛಾಟನೆಗೆ ಕಾರಣ ಎಂದಿದ್ದಾರೆ.
ಇದಕ್ಕೂ ಮುನ್ನ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದಾಗಿ ಕಿಶೋರ್ ಉಪಾಧ್ಯಾಯ ಅವರನ್ನು ಉಚ್ಛಾಟನೆ ಮಾಡಿರುವುದಾಗಿ ಕಾಂಗ್ರೆಸ್ ಹೇಳಿತ್ತು.